ADVERTISEMENT

ಶೈಕ್ಷಣಿಕ ಕ್ಷೇತ್ರ ಕಡೆಗಣಿಸಿದ ಸರ್ಕಾರ: ಯಡಿಯೂರಪ್ಪ ಅಸಮಾಧಾನ

ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 7:44 IST
Last Updated 20 ಜನವರಿ 2017, 7:44 IST
ಶೈಕ್ಷಣಿಕ ಕ್ಷೇತ್ರ ಕಡೆಗಣಿಸಿದ ಸರ್ಕಾರ: ಯಡಿಯೂರಪ್ಪ ಅಸಮಾಧಾನ
ಶೈಕ್ಷಣಿಕ ಕ್ಷೇತ್ರ ಕಡೆಗಣಿಸಿದ ಸರ್ಕಾರ: ಯಡಿಯೂರಪ್ಪ ಅಸಮಾಧಾನ   

ಚಿಕ್ಕಬಳ್ಳಾಪುರ: ‘ಸಮಾಜಲ್ಲಿ ಬಹಳ ಪ್ರಾಮುಖ್ಯತೆಯಿಂದ ಕೂಡಿರುವ ಶಿಕ್ಷಣ ಕ್ಷೇತ್ರ ರಾಜ್ಯ ಸರ್ಕಾರ ಕಡೆಗಣಿಸಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಸಂಬಂಧ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಶಿಕ್ಷಕರಿಗೆ ಸಮಾಜದಲ್ಲಿ ಅಪಾರ ಗೌರವವಿದೆ. ಸಾಮಾಜಿಕ ಕಾಳಜಿಯನ್ನೆ ತಮ್ಮ ಜೀವಾಳವನ್ನಾಗಿ ಮಾಡಿಕೊಂಡಿರುವ ಶಿಕ್ಷಕರಿಗೆ ಉತ್ತಮ ಸೌಲಭ್ಯದ ಸರ್ಕಾರದ ಕರ್ತವ್ಯ ಎಂದರು.

‘21ನೇ ಶತಮಾನವನ್ನು ಭಾರತೀಯ ಶತಮಾನವನ್ನಾಗಿ ರೂಪಿಸುವ ಕನಸು ಪ್ರಧಾನಿಯದ್ದಾಗಿದೆ. ಅದನ್ನು ನನಸು ಮಾಡಲು ಶೈಕ್ಷಣಿಕ ಅಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. 8 ಸಾವಿರ ಶಿಕ್ಷಕರ ನೇಮಕಾತಿ, 4 ಸಾವಿರ ಉಪನ್ಯಾಸಕರ ನೇಮಕಾತಿ, 4,300 ಜೆಒಸಿ ಶಿಕ್ಷಕರ ಕಾಯಂ, 425 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಶಿಕ್ಷಕರ ಕಾಯಂ ಮಾಡಲಾಗಿದೆ ಎಂದು ಹೇಳಿದರು. ಅನುದಾನ ಹೆಚ್ಚಿಸಲು ಒತ್ತಾಯ: ಶಿಕ್ಷಣ ಕ್ಷೇತ್ರದ ಅನುದಾನವನ್ನು ಹೆಚ್ಚಿಸುವಂತೆ ಯಡಿಯೂರಪ್ಪ ಒತ್ತಾಯಿಸಿದರು.

‘ರಾಜ್ಯದ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ 14,000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಕುರಿತು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಸರ್ಕಾರದ ಈ ಧೋರಣೆ ಸರಿಯಿಲ್ಲ. ಮುಂಬರುವ ವಿಧಾನಪರಿಷತ್‌ ಅಧಿವೇಶನದಲ್ಲಿ ಈ ಕುರಿತು ಪ್ರಶ್ನಿಸುತ್ತೇನೆ’ ಎಂದು ಹೇಳಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಳಗೊಡಂತೆ ಬಯಲುಸೀಮೆ ಜಿಲ್ಲೆಗಳು ತೀವ್ರ ಬರ ಅನುಭವಿಸುತ್ತಿವೆ. ಇಲ್ಲಿನ ದನ– ಕರು, ಪಶು- ಪಕ್ಷಿಗಳಿಗೆ ಕುಡಿಯಲೂ ನೀರಿಲ್ಲದಂತಾಗಿದೆ. ಸಿಗುವ ನೀರು ಫ್ಲೋರೈಡ್‌ಯುಕ್ತ ನೀರಿನಿಂದ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಸಮಸ್ಯೆಗಳನ್ನು ನೀಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಕೇಂದ್ರೀಯ ಸಂಸದ ಪಿ.ಸಿ.ಮೋಹನ್ ಮಾತನಾಡಿ, ‘ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಬರ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಬಂದಿರುವ ಹಣವನ್ನು ಖರ್ಚು ಮಾಡಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಬಡವರ ಉದ್ದಾರಕ್ಕಾಗಿ ಹಲವಾರು ಯೋಜನೆಗಳನ್ನು ತಂದಿದೆ. ಆದರೆ ಮೂರು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ರಾಜ್ಯ ಸರ್ಕಾರದ ಅಭಿವೃದ್ಧಿ ಶೂನ್ಯ’ ಎಂದು ತಿಳಿಸಿದರು.

ಹೆಬ್ಬಾಳ ಕ್ಷೇತ್ರದ ಶಾಸಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿ ಸರ್ಕಾರವಿದ್ದ ಕಾಲಘಟ್ಟ ಶಿಕ್ಷಣದಲ್ಲಿ ಸುವರ್ಣಯುಗವಾಗಿತ್ತು. ಆದರೆ ಇಂದಿನ ಸರ್ಕಾರ ಶಿಕ್ಷಣವನ್ನು ಕಡೆಗಣಿಸಿದೆ. ಸುವರ್ಣ ಯುಗವನ್ನು ಮರಳಿ ಪಡೆಯಬೇಕು ಎಂದರೆ ಬಿಜೆಪಿಯನ್ನು ಗೆಲ್ಲಿಸಬೇಕೆಂದು’ ತಿಳಿಸಿದರು.

ಸಭೆಯಲ್ಲಿ ಶಾಸಕ ಅರವಿಂದ ಲಿಂಬಾವಳಿ, ಅರುಣ್ ಶಹಾಪೂರ್, ಆಗ್ನೇಯ ಪದವೀದರ ಕ್ಷೇತ್ರದ ಅಭ್ಯರ್ಥಿ ಪಿ.ಆರ್.ಬಸವರಾಜು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ಮುಂಖಂಡರಾದ ಸತ್ಯನಾರಾಯಣ ಮಹೇಶ್, ಜ್ಯೋತಿರೆಡ್ಡಿ, ಅರುಣ್ ಬಾಬು ಇದ್ದರು.

*
ನಾನು ಆಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರುತ್ತೇನೆ.
-ಬಿ.ಎಸ್.ಯಡಿಯೂರಪ್ಪ,
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT