ADVERTISEMENT

ಒತ್ತುವರಿ ಸುಳ್ಳು ಆರೋಪ: ಮೋಟಮ್ಮ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 9:35 IST
Last Updated 10 ಮಾರ್ಚ್ 2017, 9:35 IST

ಮೂಡಿಗೆರೆ: ತಾವಾಗಲೀ, ತಮ್ಮ ಕುಟುಂ ಬದವರಾಗಲೀ ಯಾವುದೇ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಲ್ಲ ಎಂದು ವಿಧಾನಪರಿಷತ್‌ ಸದಸ್ಯೆ ಮೋ ಟಮ್ಮ ಸ್ಪಷ್ಟನೆ ನೀಡಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 1980–81 ರಲ್ಲಿ ತಾವು ಸರ್ಕಾರಿ ಹುದ್ದೆಯನ್ನು ಬಿಟ್ಟು, ರಾಜಕೀಯಕ್ಕೆ ಪ್ರವೇಶ ಮಾಡಿದಾಗ ಜೀವನ ಭದ್ರತೆಗಾಗಿ ಕುಂದೂರು ಗ್ರಾಮದಲ್ಲಿ ಬಸವಲಿಂಗಪ್ಪ ಅವರು ಅರಣ್ಯ ಮಂತ್ರಿಯಾಗಿದ್ದಾಗ ತಮ್ಮ ಕುಟುಂಬ ಕೃಷಿ ಮಾಡುತ್ತಿದ್ದ 20 ಎಕರೆ ಭೂಮಿಯನ್ನು ಕಾನೂನು ಪ್ರಕಾರವೇ ಮಂಜೂರು ಮಾಡಿಸಿಕೊಳ್ಳಲಾಗಿತ್ತು.

ಇದರಲ್ಲಿ ತಮ್ಮ ಹಾಗೂ ತಮ್ಮಿಬ್ಬರ ಮಕ್ಕಳ ಹೆಸರಿಗೆ ಭೂಮಿ ಹಂಚಿಕೆ ಯಾಗಿದೆ. ಅಲ್ಲದೇ ಈಗಿರುವ ಕೃಷಿ ಭೂಮಿಯನ್ನು ತಮ್ಮ ಪತಿಯ ಹೆಸರಿನಲ್ಲಿ ಜಿಪಿಎ ಮಾಡಿಸಿದ್ದು, ತಮಗೂ ಜಮೀ ನಿಗೂ ಸಂಬಂಧವೇ ಇಲ್ಲ ಎಂದರು.

ಜಮೀನಿನತ್ತ ತೆರಳಿ ಹಲವು ವರ್ಷಗಳೇ ಉರುಳಿವೆ. ಆದರೆ ಇದೀಗ ತಹಶೀಲ್ದಾರರ ವರ್ಗಾವಣೆಗೆ, ತಮಗೆ ಒತ್ತುವರಿ ತೆರವಿಗಾಗಿ ನೋಟಿಸ್‌ ನೀಡಿರುವುದೇ ಕಾರಣ ಎಂದು ಇಲ್ಲಿನ ತಹಶೀಲ್ದಾರರು ಸುಳ್ಳು ಆರೋಪ ಮಾಡಿದ್ದಾರೆ. ನನಗಾಗಲೀ ನನ್ನ ಕುಟುಂಬಕ್ಕಾಗಲೀ ಇದುವರೆಗೂ ತೆರವಿ ಗಾಗಿ ಯಾವುದೇ ನೋಟಿಸ್‌ ನೀಡಿಲ್ಲ. ಒಂದುವೇಳೆ ನೀಡಿದ್ದರೆ ಸ್ವೀಕೃತಿ ಪ್ರತಿ ನೀಡಬೇಕು.

ನೋಟಿಸ್‌ ನೀಡುವ ಮು ನ್ನಾ ಒತ್ತುವರಿ ಪ್ರದೇಶವನ್ನು ಗುರುತಿಸಿ ಪಕ್ಕಾಪೋಡು ಮಾಡಬೇಕು. ಇದ್ಯಾವು ದನ್ನೂ ಮಾಡದೇ ಉದ್ದೇಶಪೂರ್ವ ಕವಾಗಿ ನೋಟಿಸ್ ನೀಡಿದ್ದಕ್ಕಾಗಿಯೇ ತಮ್ಮನ್ನು ವರ್ಗಾವಣೆ ಮಾಡಲಾಗಿದೆ ಎಂದು ಸುಳ್ಳು ಹಬ್ಬಿಸಲಾಗಿದೆ

ಉದ್ದೇಶ ಪೂರ್ವಕವಾಗಿ ತಮ್ಮ ವಿರುದ್ಧ ಷಡ್ಯಂತ್ರ್ಯ ನಡೆಸಿ, ಹಿರೇಮಠ ಅವರಿಗೆ, ಸರ್ಕಾರದ ದಾಖಲೆಗಳನ್ನು ತಹಶೀಲ್ದಾರರು ನೀಡಿರುವುದು ಅಕ್ಷಮ್ಯ ವಾಗಿದ್ದು, ಇವುಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದರು.

ತಾಲ್ಲೂಕಿನಲ್ಲಿ ಅರ್ಧ ಎಕರೆ ಕೃಷಿ ಭೂಮಿ ಹೊಂದಿರುವ ಹಲವು ದಲಿತ ಕುಟುಂಬಗಳಿಗೆ ಇಲ್ಲಿನ ತಹಶೀಲ್ದಾರರು ತೆರವಿಗಾಗಿ ನೋಟಿಸ್‌  ನೀಡಿದ್ದಾರೆ. ಸರ್ಕಾರವೇ 3 ಎಕರೆವರೆಗೂ ಒತ್ತುವರಿ ತೆರವಿಗೆ ನೋಟಿಸ್‌  ನೀಡಬಾರದೆಂದು ತಿಳಿಸಿದ್ದರೂ, ಅರ್ಧ ಎಕರೆ ಒತ್ತುವರಿ ಮಾಡಿರುವ ದಲಿತ ಕುಟುಂಬಗಳಿಗೆ ನೊಟೀಸ್‌ ನೀಡಿ ಕಿರುಕುಳ ನೀಡುತ್ತಿರು ವುದರಿಂದ, ಆ ದಲಿತ ಕುಟುಂಬಗಳು ತಮ್ಮ ಮುಂದೆ ಕಣ್ಣೀರು ಹಾಕಿದ್ದರಿಂದ ಸಹಜವಾಗಿಯೇ ಇಲ್ಲಿನ ವಸ್ತುಸ್ಥಿತಿಯ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಸಲುವಾಗಿ ಪತ್ರ ಬರೆಯಲಾಗಿದೆ. ಇದ ರಲ್ಲಿ ವೈಯಕ್ತಿಕವಾಗಿ ಯಾವುದೇ ದುರುದ್ದೇಶವಿಲ್ಲ ಎಂದರು.

ತಾಲ್ಲೂಕಿನಲ್ಲಿ 23 ಸಾವಿರ ರೈತರ ಫಾರಂ 53 ಅರ್ಜಿಗಳಿದ್ದು, ಕೇವಲ 20 ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಲಾಗಿದೆ. ತಾಲ್ಲೂಕು ಕಚೇರಿಯಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.  ಯಾವೊಬ್ಬ ಬಡವರಿಗೂ ಇದುವರೆಗೂ ಸಾಗುವಳಿ ಚೀಟಿ ನೀಡಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್‌ ಪದಾಧಿಕಾರಿಗಳಾದ ಯು.ಎಚ್‌. ಹೇಮಶೇಖರ್‌, ಎಂ.ಎಸ್‌. ಅನಂತ್‌, ಬಿ.ಎಸ್‌.ಜಯರಾಂಗೌಡ, ಅಣ್ಣಯ್ಯ, ಎಂ.ಎಂ. ಲಕ್ಷ್ಮಣಗೌಡ ಮುಂತಾದ ವರಿದ್ದರು.

*
ಬಸನಿ ಗ್ರಾಮದ ನಾರಾಯಣಗೌಡ ಎಂಬ ಕಾಫಿ ಬೆಳೆಗಾರರು ಅರಣ್ಯವನ್ನು ಒತ್ತುವರಿ ಮಾಡಿದ್ದಾರೆ ಎಂಬ ಕಾರಣಕ್ಕೆ 5 ವರ್ಷಗಳ ಹಿಂದೆ ಸುಮಾರು 20 ಎಕರೆ ಕಾಫಿ ತೋಟವನ್ನು ಕಡಿದುಹಾಕಲಾಗಿತ್ತು.
-ಮೋಟಮ್ಮ,
ವಿಧಾನಪರಿಷತ್‌ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT