ಕೊಪ್ಪ: ಮೂರು ದಿನಗಳಿಂದ ತಾಲ್ಲೂಕಿ ನಾದ್ಯಂತ ಉತ್ತಮ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಎಲ್ಲೆಡೆ ಕೃಷಿ ಚಟುವಟಿಕೆ ಬಿರುಸಿನಿಂದ ಸಾಗಿದೆ.
ಪ್ರಸಕ್ತ ಮುಂಗಾರಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ವರ್ಷ ಋತುವಿನ ದೊಡ್ಡ ಮಳೆಗಳ ಸಾಲಿನ ‘ಪುನರ್ವಸು’ ನಕ್ಷತ್ರದ 4ನೇ ಪಾದದವರೆಗೂ ಮಳೆ ಬಾರದೆ ಆತಂಕಗೊಂಡಿದ್ದ ರೈತರು ಈ ತುಸು ನಿಟ್ಟುಸಿರು ಬಿಡುವಂತಾಗಿದೆ.
ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ನಿರಾಳಗೊಳಿಸಿದೆ. ಇದೇ 20ರಿಂದ ಆರಂಭಗೊಳ್ಳುವ ಪುಷ್ಯಾ ನಕ್ಷತ್ರದಲ್ಲೂ ಉತ್ತಮ ಮಳೆಯಾಗುವ ಭರವಸೆ ಮೂಡಿದೆ.
ಭತ್ತದ ಹೊಲಗದ್ದೆಗಳಲ್ಲಿ ಉಳುಮೆ ಕಾರ್ಯ ಬಿರುಸಿನಿಂದ ಸಾಗಿದ್ದು, ಅಗಡಿಯಲ್ಲಿ ಸಿದ್ಧಪಡಿಸಿರುವ ಭತ್ತದ ಸಸಿಗಳು ನಾಟಿ ಕಾರ್ಯಕ್ಕೆ ಸಿದ್ಧಗೊಂಡಿವೆ.
ಈ ಬಾರಿಯ ಭೀಕರ ಬರದಿಂದ ಬೆಂದು ಹೋಗಿರುವ ಬಹುತೇಕ ಅಡಿಕೆ ತೋಟಗಳಲ್ಲಿ ಅಳಿದುಳಿದ ಅಡಿಕೆ ಮರಗಳಿಗೆ ಮೊದಲ ಸುತ್ತಿನ ಕೊಳೆ ಔಷಧಿ ಸಿಂಪಡಣೆ ಕಾರ್ಯ ಮುಗಿದು, 2ನೇ ಹಂತದ ಸಿಂಪಡಣೆಗೆ ಸಿದ್ಧತೆ ನಡೆದಿದೆ.
ತಾಲ್ಲೂಕಿನ ವಿವಿಧೆಡೆ ಶನಿವಾರ ಬೆಳಿಗ್ಗೆ ದಾಖಲಾದ ಕಳೆದ 24 ಗಂಟೆಗಳ ಮಳೆ ಪ್ರಮಾಣ - ಕೊಪ್ಪ 21.6 ಮಿ.ಮೀ. ಹರಿಹರಪುರ 24 ಮಿ.ಮೀ. ಜಯಪುರ 17 ಮಿ.ಮೀ. ಬಸರಿಕಟ್ಟೆ 18 ಮಿ.ಮೀ. ಕಮ್ಮರಡಿ 28.3 ಮಿ.ಮೀ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.