ADVERTISEMENT

ನೋಟು ಅಮಾನ್ಯ: ಆರ್ಥಿಕ ವ್ಯವಸ್ಥೆ ಕುಸಿತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 5:52 IST
Last Updated 11 ನವೆಂಬರ್ 2017, 5:52 IST

ನರಸಿಂಹರಾಜಪುರ: ಪ್ರಧಾನಿ ನರೇಂದ್ರಮೋದಿ ಅವರು ನೋಟು ಅಮಾನ್ಯೀಕರಣ ಮಾಡಿದ್ದರಿಂದ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿತಗೊಂಡಿದೆ ಎಂದು ಕಾಂಗ್ರೆಸ್ ಮುಖಂಡ ಟಿ.ಡಿ.ರಾಜೇಗೌಡ ದೂರಿದರು. ಇಲ್ಲಿನ ನೀರಿನ ಟ್ಯಾಂಕ್ ವೃತ್ತದಲ್ಲಿ ಬುಧವಾರ ತಾಲ್ಲೂಕು ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆಯಲ್ಲಿ ಮಾತನಾಡಿದರು.

ಕಳೆದ ವರ್ಷ ನೋಟು ಅಮಾನ್ಯೀಕರಣ ಮಾಡಿದ್ದರಿಂದ ಬಡವರು, ಮಧ್ಯಮ ವರ್ಗದವರು, ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದರು. ಹಲವರು ನೋಟು ಬದಲಾವಣೆಗೆ ಸರತಿ ಸಾಲಿನಲ್ಲಿ ನಿಂತು ಜೀವತ್ಯಾಗ ಮಾಡಿದರು. ಶ್ರೀಮಂತರಿಗೆ ಯಾವುದೇ ಸಮಸ್ಯೆಯಾಗಲಿಲ್ಲ ಎಂದರು.

ಕಳೆದ ಚುನಾವಣೆ ಸಂದರ್ಭದಲ್ಲಿ ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೂ ₹15 ಲಕ್ಷ ಜಮಾ ಮಾಡುವುದಾಗಿ ಹೇಳಿಕೆ ನೀಡಿದ್ದ ನರೇಂದ್ರಮೋದಿ ಅವರು, ₹1ನ್ನು ಯಾರ ಖಾತೆಗೆ ಇದುವರೆಗೂ ಜಮಾ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.

ADVERTISEMENT

ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ‘ನೋಟು ರದ್ದತಿಯ ಬಗ್ಗೆ ಮೋದಿ ಅವರು ಕೈಗೊಂಡ ಏಕಪಕ್ಷೀಯ ನಿರ್ಧಾರದಿಂದ ರೈತರಿಗೆ, ಮಹಿಳೆಯರಿಗೆ, ಕೂಲಿಕಾರ್ಮಿಕರಿಗೆ ತೊಂದರೆಯಾಗಿದೆ. ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ‘ಅಧಿಕ ಮುಖ ಬೆಲೆಯ ನೋಟು ರದ್ದತಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಜಿಡಿಪಿ ಕುಸಿತ ಕಂಡಿದೆ. ಹಾಗಾಗಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಹೋರಾಟ ಮಾಡಬೇಕು’ ಎಂದರು.

ಬಗರ್ ಹುಕುಂ ಸಮಿತಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ‘14 ವರ್ಷಗಳಿಂದಲೂ ಶಾಸಕರಾಗಿರುವ ಜೀವರಾಜ್ ಅವರು ಬಗರ್ ಹುಕುಂ ಸಮಿತಿ ಸಭೆಯನ್ನು ನಡೆಸದೆ, ರೈತರಿಗೆ ಹಕ್ಕು ಪತ್ರ ವಿತರಿಸುವಲ್ಲಿ ವಿಫಲರಾಗಿದ್ದಾರೆ. ತಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ ಅಧಿಕಾರಿಗಳನ್ನು ದೂರುತ್ತಿದ್ದಾರೆ. ಬಗರ್ ಹುಕುಂ ರೈತರ ಸಭೆ ಕರೆಯುವುದರ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ. ಶಾಸಕರು ಬರೆದ ಪತ್ರಕ್ಕೆ ರೈತರು ಮಾನ್ಯತೆ ನೀಡದೆ ಸಭೆಯಲ್ಲಿ ಭಾಗವಹಿಸಬಾರದು’ ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಗಂಗಾಧರ್, ಮುಖಂಡರಾದ ಕೆ.ಎಂ.ಸುಂದರೇಶ್, ಇ.ಸಿ.ಸೇವಿಯಾರ್, ಅಬುಬಕರ್, ಎನ್.ಎಸ್‌.ಯು.ಪಾಧ್ಯಕ್ಷ ಸುಜಿತ್ ಇದ್ದರು.
ತಾಲ್ಲೂಕು ಕಾಂಗ್ರೆಸ್ ಕಚೇರಿಯಿಂದ ಹಳೆ ಮಂಡಗದ್ದೆ ವೃತ್ತದವರೆಗೆ ಮೇಣದ ಬತ್ತಿ ಮೆರವಣಿಗೆ ನಡೆಸಿ, ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.