ADVERTISEMENT

ಮಹಾತ್ಮರ ಸಂದೇಶ ಜೀವನದಲ್ಲಿ ಪಾಲಿಸಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:13 IST
Last Updated 7 ನವೆಂಬರ್ 2017, 6:13 IST

ತರೀಕೆರೆ: ಮಹಾನೀಯರ ಜಯಂತಿಗಳು ಆಚರಣೆಗಷ್ಟೆ ಸೀಮಿತವಾಗದೆ, ಅವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಂದು ಉಪ ವಿಭಾಗಾಧಿಕಾರಿ ಬಿ.ಬಿ.ಸರೋಜ ತಿಳಿಸಿದರು. ಪಟ್ಟಣದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಕನಕದಾಸರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕುಟುಂಬದವರ ಆಕಾಲಿಕ ಮರಣದಿಂದಾಗಿ ಜೀವನದಲ್ಲಿ ವೈರಾಗ್ಯದತ್ತ ಜಾರಿದ ಕನಕದಾಸರು, ವ್ಯಾಸರಾಜರ ಶಿಷ್ಯರಾಗಿ ತಮ್ಮ ಬದುಕನ್ನು ಸಮಾಜದ ಪರಿವರ್ತನೆಗೆ ಮೀಸಲಿಟ್ಟರು. ಮೌಢ್ಯ ಕಂದಾಚಾರಗಳನ್ನು ತಮ್ಮ ದಾಸ ಸಾಹಿತ್ಯದ ಮೂಲಕ ಖಂಡಿಸಿದರು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಎಚ್.ಶ್ರೀನಿವಾಸ್, ‘ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಕನಕರ ಚಿಂತನೆಗಳು ತಂದು ಕೊಡುತ್ತವೆ. ರಾಜ್ಯ ಸರ್ಕಾರ ಸಣ್ಣ ವರ್ಗಗಳನ್ನು ಗುರುತಿಸಿ ಸಮಾಜದ ಮುನ್ನಲೆಗೆ ತರುವ ಕೆಲಸ ಮಾಡುವ ಮೂಲಕ ದಾರ್ಶನಿಕರ ಆಶಯಗಳನ್ನು ಈಡೇರಿಸುತ್ತಿದೆ’ ಎಂದರು.

ADVERTISEMENT

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ವಿಜಯಕುಮಾರ್ ವಿಶೇಷ ಉಪನ್ಯಾಸ ನೀಡಿದರು. ಸಮಾಜದಲ್ಲಿನ ವಿವಿಧ ಕ್ಷೇತ್ರದಲ್ಲಿನ ಪ್ರತಿಭೆಗಳನ್ನು ಪುರಸ್ಕರಿಸಲಾಯಿತು. ಕನಕ ಮಹಿಳಾ ಸಮಾಜದವರು ಕೀರ್ತನೆಗಳನ್ನು ಹಾಡಿದರು.

ತಹಶೀಲ್ದಾರ್ ಧರ್ಮೋಜಿರಾವ್, ಪುರಸಭೆಯ ಉಪಾಧ್ಯಕ್ಷ ಅಶೋಕ್‌ ಕುಮಾರ್, ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಪಾಂಡುರಂಗಪ್ಪ, ಕನಕ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಟಿ.ಎಂ.ಲೋಹಿತ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಂ.ನರೇಂದ್ರ, ಪುರಸಭೆ ಮಾಜಿ ಅಧ್ಯಕ್ಷರಾದ ಧರ್ಮರಾಜ್, ಪ್ರಕಾಶ್‍ವರ್ಮ, ಸದಸ್ಯೆ ಸುನೀತಾ ಇದ್ದರು.
ಸಭೆಯ ನಂತರ ಪಟ್ಟಣದ ಬೀದಿಗಳಲ್ಲಿ ಸ್ತಬ್ಧಚಿತ್ರಗಳನ್ನು ಹಾಗೂ ವೇಷಭೂಷಣ ತೊಟ್ಟ ಕಲಾವಿದರೊಂದಿಗೆ ಮೆರವಣಿಗೆ ನಡೆಯಿತು. ಮೆರವಣಿಗೆ ಸಂದರ್ಭದಲ್ಲಿ ಕೆಲ ತಾಸು ಮಳೆ ಸುರಿದರೂ ಲೆಕ್ಕಸದೇ ಯುವಕರು ಮೆರವಣಿಗೆಯಲ್ಲಿ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.