ನರಸಿಂಹರಾಜಪುರ: ದಲಿತರನ್ನು ಮದುವೆಯಾಗುವ ವಿಷಯದಲ್ಲಿ ತಮ್ಮ ವಿರುದ್ಧ ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ರಾಜಕಾರಣಿಯಾಗುವ ಅರ್ಹತೆಯಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಪಟ್ಟಣಕ್ಕೆ ಬುಧವಾರ ಬಂದಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದೆಯಾಗಿ ಈ ಭಾಗದ ರೈತರ, ಅಡಿಕೆ ಬೆಳಗಾರರ ಸಮಸ್ಯೆಗೆ ಸ್ಪಂದಿಸುವುದನ್ನು ಬಿಟ್ಟು ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ,ಅಲ್ಲದೇ ಜಾತಿ,ಜಾತಿಗಳನ್ನು ಎತ್ತಿ ಕಟ್ಟಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಫಸಲ್ ಭೀಮಾ ಯೋಜನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಇದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ, ವಿಮಾ ಕಂಪನಿಗೆ ಹಣ ಮಾಡಿಕೊಡುವ ಹುನ್ನಾರ ಅಡಗಿದೆ. 2016ರಲ್ಲಿ ದೇಶದಲ್ಲಿ ₹9ಸಾವಿರ ಕೋಟಿ ಸಂಗ್ರಹವಾಗಿದ್ದು ಅದರಲ್ಲಿಯೆ ತೆರಿಗೆ ವಿಮಾ ಮೊತ್ತ ₹2764 ಕೋಟಿ ನೀಡಿದ್ದು. ವಿಮಾ ಕಂಪನಿಗೆ ₹6236 ಕೋಟಿ ಲಾಭ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ನ ಹಿರಿಯ ನಾಯಕರಾದ ಎಸ್.ಎಂ. ಕೃಷ್ಣ, ವಿಶ್ವನಾಥ್, ಕೆ. ಜಯಪ್ರಕಾಶ್ ಹೆಗ್ಡೆ ಪಕ್ಷ ತೊರೆದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕೃಷ್ಣ ಅವರು ತಪ್ಪು ನಿರ್ಧಾರದಿಂದ ಪಕ್ಷ ಬಿಟ್ಟಿದ್ದು, ವಿಶ್ವನಾಥ್ಗೆ ಪಕ್ಷ ಶಾಸಕ, ಸಚಿವ,ಸಂಸದ,ಸೇರಿದಂತೆ ವಿವಿಧ ಅವಕಾಶ ಕಲ್ಪಿಸಿದೆ. ಅಲ್ಲದೇ ಅವರ ಮಗನನ್ನು ಜಿಲ್ಲಾ ಪಂಚಾಯಿತಿ ಸದಸ್ಯನ ನ್ನಾಗಿ ಮಾಡಿದೆ. ಕೆ. ಜಯಪ್ರಕಾಶ್ ಹೆಗ್ಡೆ ನಮ್ಮ ಆತ್ಮೀಯರಾಗಿದ್ದು ಆತುರದಿಂದ ಪಕ್ಷ ತೊರೆದಿದ್ದಾರೆ.
ಅವರ ಸಿದ್ದಾಂತಕ್ಕೂ ಬಿಜೆಪಿ ಸಿದ್ದಾಂತಕ್ಕೂ ವ್ಯತ್ಯಾಸ ಇದ್ದು ಕೆಲವೇ ದಿನ ಗಳಲ್ಲಿ ಅಲ್ಲಿ ಭ್ರಮನಿರಸ ಹೊಂದಲ್ಲಿದ್ದಾರೆ ಎಂದರು. ಏಪ್ರಿಲ್ ನಲ್ಲಿ ಚುನಾವಣೆ ನಡೆಯಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಮೈಸೂರು ವಿಭಾಗದ ಕಾಂಗ್ರೆಸ್ ಉಸ್ತುವಾರಿ ವಿಷ್ಣುನಾಥನ್, ಮಾತನಾಡಿ ಸರ್ಕಾರದ ಸಾಧನೆಗಳನ್ನು ಮನೆ,ಮನೆಗೆ ತಿಳಿಸುವ ಕೆಲಸ ಮಾಡುತ್ತಿದ್ದು ಪಕ್ಷ ರಾಜ್ಯದಲ್ಲಿ ಪಕ್ಷ ಪುನಃ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಟಿ.ಡಿ. ರಾಜೇಗೌಡ, ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್, ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.