ಅಜ್ಜಂಪುರ: ಸಾಲಬಾಧೆ ಸೇರಿದಂತೆ ಜೀವನದಲ್ಲಿ ಎದುರಾಗುವ ಯಾವುದೇ ಸಂಕಷ್ಟಗಳಿಗೆ ಆತ್ಮಹತ್ಯೆ ಪರಿಹಾರ ಅಲ್ಲ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣ ಸಮೀಪ ಗಡೀಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಸಾಲ ಬಾಧೆಯಿಂದ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಕಲ್ಲಾಪುರ ಗ್ರಾಮದ ರೈತ ಲೋಕೇಶ್ ಕುಟುಂಬದವರಿಗೆ ಮಂಗಳವಾರ ಪರಿಹಾರದ ಚೆಕ್ ನೀಡಿ ಅವರು ಮಾತನಾಡಿ, ‘ರೈತ ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದು ನೋವಿನ ಸಂಗತಿ.
ಸಂಕಷ್ಟಗಳು ಬಂದಾಗ ಧೈರ್ಯದಿಂದ ಎದುರಿಸಬೇಕು. ಬದಲಿಗೆ ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಾವಿನಿಂದ ತಮ್ಮ ಹೊಣೆಗಾರಿಕೆಯನ್ನು ಮಡದಿ, ಮಕ್ಕಳ ಮೇಲೆ ಹೇರಿದಂತಾಗುವುದೇ ವಿನಾ ಕಷ್ಟಗಳು ಕೊನೆಯಾಗುವುದಿಲ್ಲ’ ಎಂದು ಹೇಳಿದರು.
‘ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಪರಿಹಾರದ ಮೊತ್ತವನ್ನು ₹5 ಲಕ್ಷಕ್ಕೆ ಹಾಗೂ ಅವರ ಪತ್ನಿಗೆ ಮಾಸಿಕ ವೇತನ ವನ್ನು ₹2,000 ಗೆ ರಾಜ್ಯ ಸರ್ಕಾರ ಹೆಚ್ಚಿಸಿದ್ದು, ರೈತರ ಸಂಕಷ್ಟವನ್ನು ಸ್ವಲ್ಪಮಟ್ಟಿಗಾದರೂ ಕಡಿಮೆಗೊಳಿಸಲು ಸಹಕಾರ ಸಂಘಗಳಲ್ಲಿನ ₹50,000 ವರೆಗಿನ ಸಾಲ ಮನ್ನಾ ಮಾಡಿದೆ’ ಎಂದು ತಿಳಿಸಿದರು. ಕೃಷಿ ಅಧಿಕಾರಿ ಚಿತ್ರಸೇನ, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ನಟ ರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.