ಮೂಡಿಗೆರೆ: ಪಟ್ಟಣದ ಛತ್ರ ಮೈದಾನದ ನಿವಾಸಿಯಾದ ಯಾದವ ಸುವರ್ಣ ಅವರ ಪುತ್ರಿ ಧನ್ಯಶ್ರೀ (20) ತಮ್ಮ ಮನೆಯಲ್ಲಿ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಟ್ಟಣದ ಡಿಎಸ್ ಬಿಳೀಗೌಡ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಅವರು, ಇದೇ 8 ರಿಂದ ಸೆಮಿಸ್ಟರ್ ಪರೀಕ್ಷೆ ಪ್ರಾರಂಭವಾಗಲಿದ್ದು, ಮೊಬೈಲ್ನಲ್ಲಿ ಹೆಚ್ಚು ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ತಂದೆ ಯಾದವ ಸುವರ್ಣ ಅವರು ಮಗಳಿಂದ ಮೊಬೈಲನ್ನು ಕಿತ್ತುಕೊಂಡಿದ್ದರು. ಇದರಿಂದ ಬೇಸರಗೊಂಡ ಧನ್ಯಶ್ರೀ ಶನಿವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಯಾದವ ಸುವರ್ಣ ಮೂಡಿಗೆರೆ ಪೊಲೀಸ್ಠಾಣೆಗೆ ದೂರು ನೀಡಿದ್ದಾರೆ.
ಸಂದೇಶ ಕಾರಣ?
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಧನ್ಯಶ್ರೀ ಮೊಬೈಲ್ನಲ್ಲಿ ಕಳುಹಿಸಿರುವುದು ಎನ್ನಲಾದ ಸಂದೇಶಗಳು ಭಾನುವಾರ ವೈರಲ್ ಆಗಿದ್ದು, ಆತ್ಮಹತ್ಯೆಯ ಚರ್ಚೆ ಬಿರುಸು ಪಡೆದುಕೊಂಡಿದೆ.
ಸಂದೇಶ ಬರೆದಿರುವ ಪರದೆಯ ಛಾಯಾಚಿತ್ರದ ಮೇಲ್ಭಾಗದಲ್ಲಿ ಧನ್ಯ ಎಂದು ಹೆಸರನ್ನು ದಾಖಲಿಸಿಕೊಂಡಿದ್ದು, ಸುಮಾರು ನಾಲ್ಕೈದು ಛಾಯಾಚಿತ್ರಗಳು ವೈರಲ್ ಆಗಿವೆ. ಆ ಚಿತ್ರಗಳಲ್ಲಿ ಒಂದು ಧರ್ಮದ ಪರವಾಗಿ ಇದ್ದು, ಆ ಧರ್ಮವನ್ನು ಪ್ರೀತಿಸುತ್ತೇನೆ’ ಇದನ್ನು ವಿರೋಧಿಸಿದ ವ್ಯಕ್ತಿಯೊಬ್ಬರೊಂದಿಗೆ ವಾಗ್ವಾದ ನಡೆಸಿರುವುದು ಕಂಡು’ ಬಂದಿದೆ.
ಈಗಾಗಲೇ ವಿದ್ಯಾರ್ಥಿನಿಯ ತಂದೆ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪಟ್ಟಣದ ಮಹಾತ್ಮಗಾಂಧಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಶವವನ್ನು ಹಸ್ತಾಂತರಿಸಿದ್ದು, ಬೀಜುವಳ್ಳಿ ಚಿತಾಗಾರದಲ್ಲಿ ಭಾನುವಾರ ಅಂತ್ಯಸಂಸ್ಕಾರ ನಡೆಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.