ಚಿಕ್ಕಮಗಳೂರು: ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಗುಳವಳ್ಳಿಯಲ್ಲಿ ಇದೇ 7ರಂದು ಗ್ರಾಮವಾಸ್ತವ್ಯ ಹೂಡುವರು’ ಎಂದು ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಭೋಜೇಗೌಡ ಇಲ್ಲಿ ಶನಿವಾರ ತಿಳಿಸಿದರು.
‘ಕುಮಾರಸ್ವಾಮಿ ಅವರು 7 ರಂದು ಬೆಳಿಗ್ಗೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಚುನಾವಣೆ ಪ್ರಚಾರ ಆರಂಭಿಸಲಿದ್ದಾರೆ. ‘ಕರ್ನಾಟಕ ವಿಕಾಸ ವಾಹನ’ದಲ್ಲಿ ಪ್ರಚಾರ ಯಾತ್ರೆ ಕೈಗೊಳ್ಳುವರು. ಮೈಸೂರು, ಕೆ.ಆರ್.ಪೇಟೆ, ಚನ್ನರಾಯಪಟ್ಟಣ, ಬೇಲೂರುಗಳಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವರು.
ಸಂಜೆ 6.30ಕ್ಕೆ ಚಿಕ್ಕಮಗಳೂರು ತಲುಪಿ, ಆಜಾದ್ ಪಾರ್ಕ್ ವೃತ್ತದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ನಂತರ, ಮುಗುಳವಳ್ಳಿಯಲ್ಲಿ ವಾಸ್ತವ್ಯ ಹೂಡುವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವುದು ವಾಸ್ತವ್ಯದ ಉದ್ದೇಶ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ‘ಕುಮಾರಸ್ವಾಮಿ ಅವರು ಈ ಬಾರಿ ಗ್ರಾಮವಾಸ್ತವ್ಯವನ್ನು ಚಿಕ್ಕಮಗಳೂರು ಜಿಲ್ಲೆಯಿಂದ ಆರಂಭಿಸಲಿದ್ದಾರೆ. ದಲಿತ ಧರ್ಮಪಾಲ ಅವರ ಮನೆಯಲ್ಲಿ ಕುಮಾರಸ್ವಾಮಿ ತಂಗಲಿದ್ದಾರೆ. ಗ್ರಾಮದಲ್ಲಿ ಸಭೆ ನಡೆಸಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುವರು. 8 ರಂದು ತರೀಕೆರೆಯಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವರು’ ಎಂದು ಹೇಳಿದರು.
ಜೆಡಿಎಸ್ ಮುಖಂಡರಾದ ರಂಜನ್ ಅಜಿತ್ಕುಮಾರ್, ಮಂಜಪ್ಪಗೌಡ, ಬಾಲಕೃಷ್ಣೇಗೌಡ, ವೆಂಕಟೇಶಗೌಡ, ಬೈರೇಗೌಡ, ಸುರೇಶ್, ಲಕ್ಷ್ಮಣಗೌಡ, ನಿಸಾರ್ಅಹಮದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.