ಹೊಸದುರ್ಗ: ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಂಡ ಯೋಜನೆಗಳು, ಪೂರ್ಣಗೊಂಡ ಕಾಮಗಾರಿಗಳು, ಶಂಕುಸ್ಥಾಪನೆಯಾಗಿ ಬಾಕಿ ಉಳಿದಿರುವ ಕೆಲಸಗಳು, 2017ರ ಒಳಗೆ ಭದ್ರೆ ನೀರು ಹರಿಸುವುದಾಗಿ ಹೇಳಿಕೆ ನೀಡಿದ್ದರ ಕುರಿತು ಶಾಸಕ ಬಿ.ಜಿ.ಗೋವಿಂದಪ್ಪ ಅವರು ಶ್ವೇತ್ರಪತ್ರ ಹೊರಡಿಸಲಿ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ನವೀನ್ ಒತ್ತಾಯಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ನವ ಕರ್ನಾಟಕ ಯಾತ್ರೆ ಸಿದ್ಧತೆ ಅಂಗವಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಶಾಸಕರು ಶ್ವೇತಪತ್ರ ಹೊರಡಿಸಿ ಅದರ ಬಗ್ಗೆ ಚರ್ಚಿಸಲು ಸ್ಥಳ ಹಾಗೂ ದಿನಾಂಕ ನಿಗದಿ ಮಾಡಿದರೆ ಬಿಜೆಪಿ ಭಾಗವಹಿಸುತ್ತದೆ. ನಾವು ದಾಖಲೆ ಸಮೇತ ಆಡಳಿತ ಪಕ್ಷದ ಅವ್ಯವಹಾರ ಬಹಿರಂಗ ಮಾಡುತ್ತೇವೆ. ತಾಲ್ಲೂಕಿನ ಅಭಿವೃದ್ಧಿಯ ವಾಸ್ತವಿಕ ಚಿತ್ರಣವನ್ನು ಜನರಿಗೆ ತಿಳಿಸುತ್ತೇವೆ. ಮುಂದಿನ ಚುನಾವಣೆ ಗಿಮಿಕ್ಗಾಗಿ ಶಾಸಕರ ಬೆಂಬಲಿಗರು ನೂರಾರು ಕೋಟಿ ವೆಚ್ಚದ ಚೆಕ್ಡ್ಯಾಂ, ಗೋಕಟ್ಟೆಗಳಾಗಿವೆ ಎಂದು ಹೇಳುತ್ತಿದ್ದಾರೆ. ಶಾಸಕ ಬಿ.ಜಿ.ಗೋವಿಂದಪ್ಪ ಪ್ರಚಾರ ಗಿಟ್ಟಿಸಿಕೊಳ್ಳಲು ₹ 350 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು’ ಎಂದು ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಹೊಸದುರ್ಗದಲ್ಲಿ ಜ.10ರಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನವಚೈತನ್ಯ ಯಾತ್ರೆ ಸಮಾರಂಭ ನಡೆಯಲಿದೆ. ಸುಮಾರು 20 ರಾಜ್ಯದ ಬಿಜೆಪಿ ನಾಯಕರು, ಕೇಂದ್ರ ಸಚಿವರು ಬರಲಿದ್ದಾರೆ. ತಾಲ್ಲೂಕಿನಿಂದ 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅಂದು ರಾಜ್ಯ ಕಾಂಗ್ರೆಸ್ ಆಡಳಿತದ ವೈಫಲ್ಯ ಹಾಗೂ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ನವ ಚೈತನ್ಯ ಯಾತ್ರೆ ಯಶಸ್ಸಿಗೆ ತಾಲ್ಲೂಕಿನ 14 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡಲಾಗಿದೆ. ಇನ್ನುಳಿದ ಪಂಚಾಯ್ತಿ ಜನರನ್ನು ಆಹ್ವಾನಿಸಲಾಗುವುದು. ನವ ಚೈತನ್ಯ ಯಾತ್ರೆಗೆ ತಾಲ್ಲೂಕಿನ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಬುರುಡೇಕಟ್ಟೆ ರಾಜೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಟಿ.ವಟ್ಟಿ ಲಕ್ಷ್ಮಣ್, ಕಾರ್ಯದರ್ಶಿ ಜಗದೀಶ್, ದೊಡ್ಡಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.