ADVERTISEMENT

ಇಲಾಖೆಗಳ ನಡುವೆ ಸಾಮರಸ್ಯ ಇರಲಿ

​ಪ್ರಜಾವಾಣಿ ವಾರ್ತೆ
Published 17 ಮೇ 2017, 5:29 IST
Last Updated 17 ಮೇ 2017, 5:29 IST

ಚಳ್ಳಕೆರೆ: ಕರ್ತವ್ಯ ನಿರ್ವಹಿಸುವ ವೇಳೆ ಪೊಲೀಸ್‌  ಮತ್ತು ನ್ಯಾಯಾಂಗ ಇಲಾಖೆಗಳ ನಡುವೆ ಉತ್ತಮ ಸಹಕಾರ ಇರುವುದು ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ತಿಳಿಸಿದರು.

ನಗರದ ದಲ್ಲಾಲರ ಸಮುದಾಯ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅಭಿಯೋಜನಾ, ಪೊಲೀಸ್‌, ಅಬಕಾರಿ ಇಲಾಖೆ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರದಲ್ಲಿ ಮಾತನಾಡಿದರು.

ನ್ಯಾಯಾಲಯದ ಕಲಾಪಗಳನ್ನು ವಸ್ತುನಿಷ್ಠವಾಗಿ ನಡೆಸಲು ಅಗತ್ಯ ಸಾಕ್ಷಿ, ಪುರಾವೆ, ನಿಖರ ಮಾಹಿತಿ ಅಗತ್ಯವಿರುತ್ತದೆ. ಇಂತಹ ಮಾಹಿತಿಯನ್ನು ಪೊಲೀಸ್‌ ಇಲಾಖೆ ಜವಾಬ್ದಾರಿಯಿಂದ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ ಎಂದರು.

ADVERTISEMENT

ಯಾವುದೇ ಆರೋಪಿ ವಿರುದ್ಧ ಸಾಕ್ಷ್ಯಗಳನ್ನು ದಾಖಲಿಸುವ ವೇಳೆ ಪ್ರತಿಯೊಬ್ಬ ಅಧಿಕಾರಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೋಲಿಸ್‌ ಇಲಾಖೆ ಮತ್ತು ವಕೀಲರ ಪಾತ್ರ ಅತ್ಯಂತ ಪ್ರಮುಖ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ಮಾತನಾಡಿ, ‘ಸಾರ್ವಜನಿಕರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಸಂವಿಧಾನದ ಆಶಯ ದಂತೆ ಪ್ರತಿಯೊಬ್ಬರೂ ನೆಮ್ಮದಿಯಿಂದ ಜೀವನ ಸಾಗಿಸಲು ಅಗತ್ಯ ಸಹಕಾರ ನೀಡಲಾಗುತ್ತದೆ’ ಎಂದರು.

ಕ್ರಿಮಿನಲ್‌ ಪ್ರಕರಣಗಳಲ್ಲಿ ತನಿಖೆ ನಡೆಸುವ ವೇಳೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದ್ದು, ಅಪರಾಧಿಗಳಿಗೆ ಶಿಕ್ಷೆ ಮತ್ತು ನಿರಪರಾಧಿಗಳಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ ಎಂದರು.

ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಕಾವೇರಿ ಬಿ. ಕಲ್ಮಠ, ಎಸ್‌.ಆರ್‌. ದಿಂಡಲಕೊಪ್ಪ, ಹೆಚ್ಚುವರಿ ನ್ಯಾಯಾಧೀಶರಾದ ಕೋಟೆಪ್ಪ ಕಾಂಬ್ಳೆ, ವಕೀಲರ ಸಂಘದ ಅಧ್ಯಕ್ಷ ಜಿ.ಆರ್‌.ಅಶ್ವತ್ಥ ನಾಯಕ, ಅಬಕಾರಿ ಇಲಾಖೆ ಉಪ ಆಯುಕ್ತ ಟಿ.ನಾಗರಾಜಪ್ಪ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ, ಡಿವೈಎಸ್‌ಪಿ ಎಸ್‌.ರೋಷನ್‌ ಜಮೀರ್‌, ಸಿಪಿಐ ಎನ್.ತಿಮ್ಮಣ್ಣ, ಪ್ರಧಾನ ಸರ್ಕಾರಿ ವಕೀಲ ಬಿ.ಜಯರಾಂ, ಎಸ್‌.ವಿ. ಪಾಟೀಲ್‌, ಎನ್‌.ಬೀರಲಿಂಗಪ್ಪ, ಬಿ.ಟಿ.ಮಹಾಬಲೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.