ADVERTISEMENT

ಕೋಟೆನಗರಿಯ ತುಂಬಾ ಪೊಲೀಸರ ಕಾವಲು !

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 6:35 IST
Last Updated 8 ನವೆಂಬರ್ 2017, 6:35 IST
ಸುದ್ದಿಗೋಷ್ಠಿಗೆ ಅನುಮತಿ ನೀಡದ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ಸಂಸದ ಪ್ರತಾಪ್ ಸಿಂಹ
ಸುದ್ದಿಗೋಷ್ಠಿಗೆ ಅನುಮತಿ ನೀಡದ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ಸಂಸದ ಪ್ರತಾಪ್ ಸಿಂಹ   

ಚಿತ್ರದುರ್ಗ: ನಗರದಲ್ಲಿ 10ರಂದು ನಡೆಯಲಿರುವ ಟಿಪ್ಪು ಜಯಂತಿ ಹಾಗೂ ಮಂಗಳವಾರ ನಡೆಯಬೇಕಿದ್ದ ಬಿಜೆಪಿ, ಆರ್‌ಎಸ್ಎಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಾದ್ಯಂತ ಮಂಗಳವಾರದಿಂದ ನಾಲ್ಕು ದಿನ ನಿಷೇಧಾಜ್ಞೆ ಘೋಷಿಸಲಾಗಿದ್ದು, ನಗರದ ಮೂಲೆ ಮೂಲೆಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.
ನಗರ ಪ್ರವೇಶಿಸುವ ಎಲ್ಲ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ನಿರ್ಮಿಸಿ, ಪೊಲೀಸ್ ಕಾವಲಿರಲು ಶೆಡ್‌ಗಳನ್ನು ನಿರ್ಮಿಸಲಾಗಿತ್ತು.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ವಿಚಾರ ಸಂಕಿರಣ ನಡೆಸಬೇಕಿದ್ದ ಸ್ಟೇಡಿಯಂ ರಸ್ತೆಯಲ್ಲಿರುವ ಜಿ.ಜಿ. ಸಮುದಾಯ ಭವನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠದ ಸುತ್ತಾ ಪೊಲೀಸರನ್ನು ನಿಯೋಜಿಸಲಾಗಿತ್ತು.

ಜೆಎಂಐಟಿ ವೃತ್ತ, ಹೊಸಪೇಟೆ ರಸ್ತೆ (ಎನ್‌ಎಚ್‌ 13), ಚಳ್ಳಕೆರೆ ಟೋಲ್ ಗೇಟ್, ತುರುವನೂರು ರಸ್ತೆ ಪ್ರವೇಶ ದ್ವಾರ, ಜಿಲ್ಲಾಧಿಕಾರಿ ಕಚೇರಿ, ಒನಕೆ ಓಬವ್ವ ವೃತ್ತ, ಎಂ.ಜಿ.ಸರ್ಕಲ್ ಸೇರಿದಂತೆ, ಹಲವು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾ­ಗಿತ್ತು. ನಗರ ಪ್ರವೇಶಿಸುವ ಎಲ್ಲ ವಾಹನಗಳ ನೋಂದಣಿ ಸಂಖ್ಯೆಯನ್ನು ಗುರುತು ಹಾಕಿಕೊಳ್ಳುತ್ತಿದ್ದರು.

ADVERTISEMENT

ಮದಕರಿ ಸರ್ಕಲ್, ಗಾಂಧಿ ವೃತ್ತ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ವಾಹನಗಳನ್ನು ನಿಲ್ಲಿಸಲಾಗಿತ್ತು. ಮಂದಿರ, ಮಸೀದಿ, ಬಿಜೆಪಿ ಶಾಸಕ ಜಿ.ಎಚ್ ತಿಪ್ಪಾರೆಡಿ ಮತ್ತು ಸಂಘಟಕರ ಪ್ರಮುಖರ ಮನೆಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು.

ಕಾಂಗ್ರೆಸ್‌ ಸಭೆಗೆ ತಡೆ; ನೋಟಿಸ್‌: ನಗರದ ಸ್ಟೇಡಿಯಂ ರಸ್ತೆಯ ವೀರಸೌಧದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯನ್ನು ಪೊಲೀಸರು ರದ್ದುಗೊಳಿಸಿದರು.
ನಿಷೇಧಾಜ್ಞೆ ಆದೇಶ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ವೀರಸೌಧದ ಉಸ್ತುವಾರಿ ಹಾಗೂ ಸಭೆಯಲ್ಲಿ ಭಾಗವಹಿಸಿದ್ದವರಿಗೆ ನೋಟಿಸ್ ನೀಡಬೇಕು ಎಂದು ಎಎಸ್‌ಪಿ ಲಕ್ಷ್ಮಣ್ ನಿಂಬರಿಗೆ ಅಧಿಕಾರಿಗಳಿಗೆ ಸೂಚಿಸಿದರು. ಈ ನಡುವೆ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಜೆಪಿ ಮುಖಂಡ ಜಿ.ಎಂ ಸುರೇಶ್ ಸೇರಿದಂತೆ, 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.