ಚಿಕ್ಕಜಾಜೂರು: ಮಳೆ ಬಂದಾಗ ಗ್ರಾಮದಿಂದ ಹರಿದು ಬರುವ ಚರಂಡಿ ನೀರು ಮನೆಯೊಳಗ್ಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಆದ್ದರಿಂದ ಗ್ರಾಮ ಪಂಚಾಯ್ತಿಯವರು ಇಲ್ಲಿ ಚರಂಡಿಯನ್ನು ನಿರ್ಮಿಸಿ, ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಗ್ರಾಮದ ಚಿಕ್ಕಂದವಾಡಿ ರಸ್ತೆಯ ತಿರುವಿನಲ್ಲಿರುವ ಚರಂಡಿ ಹಿಂದಿನ ಚರಂಡಿ ಆಳಕ್ಕಿಂತ ಸ್ವಲ್ಪ ಎತ್ತರವಾಗಿದ್ದು, ಊರೊಳಗಿಂದ ಚರಂಡಿ ಮೂಲಕ ಹರಿದು ಬರುವ ನೀರು ಮುಂದೆ ಹರಿಯದೆ ಚರಂಡಿಯಲ್ಲಿ ತುಂಬಿಕೊಳ್ಳುತ್ತದೆ. ಮಳೆ ಬಂದರಂತೂ, ಇಲ್ಲಿನ ಸ್ಥಿತಿ ಹೇಳ ತೀರದು, ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಹಲವು ವರ್ಷಗಳಿಂದ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಚರಂಡಿಯಲ್ಲಿ ಮಳೆ ನೀರು ಮತ್ತು ಕೊಚ್ಚೆ ನೀರು ನಿಲ್ಲುವುದರಿಂದ ಹಲವು ದಿನಗಳವರೆಗೆ ಸುತ್ತಮುತ್ತ ಪ್ರದೇಶವೆಲ್ಲಾ ದುರ್ವಾಸನೆಯಿಂದ ತುಂಬಿಕೊಳ್ಳುತ್ತದೆ. ಈ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಇಲ್ಲಿನ ನಿವಾಸಿಗಳಿಗೆ ಆಗುವ ತೊಂದರೆಯನ್ನು ನಿವಾರಿಸಬೇಕೆಂದು ನಿವಾಸಿಗಳಾದ ಮಂಜಮ್ಮ, ಜಿ.ಟಿ.ಈಶ್ವರಪ್ಪ, ರತ್ನಮ್ಮ, ಲಕ್ಷ್ಮೀದೇವಿ, ಆಮನಾಳ್ ಈಶ್ವರಪ್ಪ, ಕವಿತಾ ನರಸಿಂಹರಾಜು, ಅಣ್ಣಪ್ಪ, ಪ್ರೇಮಾ, ರವಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.