ADVERTISEMENT

ನಾಳೆಯಿಂದ ವಾಲಿಬಾಲ್ ಚಾಂಪಿಯನ್‌ಷಿಪ್‌

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಮತ್ತು ತಂಡ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:11 IST
Last Updated 12 ಜನವರಿ 2017, 11:11 IST
ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲೆ ಆವರಣದಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಪಂದ್ಯಾವಳಿಯ ಸಿದ್ದತೆ ಮತ್ತು ಭದ್ರತಾ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಮತ್ತು ಸಿಬ್ಬಂದಿ ಪರಿಶೀಲಿಸಿದರು.
ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲೆ ಆವರಣದಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಪಂದ್ಯಾವಳಿಯ ಸಿದ್ದತೆ ಮತ್ತು ಭದ್ರತಾ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಮತ್ತು ಸಿಬ್ಬಂದಿ ಪರಿಶೀಲಿಸಿದರು.   
ಚಿತ್ರದುರ್ಗ: ನಗರದ ಹಳೆ ಮಾಧ್ಯಮಿಕ ಶಾಲೆ ಮೈದಾನದಲ್ಲಿ ಇದೇ 13 ರಿಂದ ನಡೆಯಲಿರುವ 43ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‌ ಷಿಪ್‌ ವೇಳೆ ಕೈಗೊಳ್ಳ ಬೇಕಾದ ಭದ್ರತಾ ಸಿದ್ಧತೆಗಳನ್ನು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಪರಿಶೀಲಿಸಿ, ಆಯೋಜ ಕರಿಗೆ ಸೂಚನೆಗಳನ್ನು ನೀಡಿದರು.
 
ಭದ್ರತೆ ದೃಷ್ಟಿಯಿಂದ ಪಂದ್ಯ ನಡೆಯುವ ಸ್ಥಳ, ಕ್ರೀಡಾಪಟುಗಳು ಉಳಿಯುವ ವಸತಿ ನಿಲಯಗಳು, ಪಾರ್ಕಿಂಗ್ ತಾಣಗಳಲ್ಲಿ  24 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಎಸ್‌ಪಿ ಆಯೋಜಕರಿಗೆ ಸೂಚಿಸಿದರು. ಇದರಲ್ಲಿ 10 ಸಿಸಿ ಟಿವಿ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆಯಿಂದ ಅಳವಡಿಸು ವುದಾಗಿ ತಿಳಿಸಿದರು. ಫೈನಲ್ ಪಂದ್ಯದ ದಿನ ಸಿಸಿ ಕ್ಯಾಮೆರಾಗಳ ಸಂಖ್ಯೆ ಹೆಚ್ಚಿಸಲು ಎಸ್‌ಪಿ ಸೂಚಿಸಿದರು.
 
‘ಕ್ರೀಡಾಪಟಗಳು ಉಳಿಯುವ ವಸತಿ ನಿಲಯಗಳಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ ಸ್ಥಾಪಿಸುವುದಲ್ಲದೇ, ಬಾಲಕಿಯರು ಉಳಿಯುವ ವಸತಿ ನಿಲಯಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಭದ್ರತೆ ದೃಷ್ಟಿಯಿಂದ ಪಂದ್ಯ ನಡೆಯುವ ಮೈದಾನದ ಸಮೀಪದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಒಂದು ತಂಡವನ್ನು ನಿಯೋಜಿಸಲಾಗುತ್ತಿದೆ. ಪ್ರೇಕ್ಷಕರ ಸಂಖ್ಯೆ ಆಧರಿಸಿ, ಭದ್ರತೆಯನ್ನು ಹೆಚ್ಚಿಸುವುದಾಗಿ’ ಎಸ್‌ಪಿ ತಿಳಿಸಿದರು.
 
‘ಪಂದ್ಯ ನಡೆಯುವ ಮೈದಾನದಲ್ಲಿ ಒಂದೇ ಪ್ರವೇಶದ್ವಾರ. ಮೈದಾನದೊಳಗೆ ವಾಹನ ಪ್ರವೇಶ ನಿಷಿದ್ದ. ಹೀಗಾಗಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ನಗರಸಭೆ ಹೊಸ ಕಟ್ಟದ ಹಿಂಭಾಗದಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಗಣ್ಯರ ವಾಹನಗಳು ಬರುವಾಗ ಟ್ರಾಫಿಕ್ ಬಂದ್‌ ಮಾಡಲಾಗುತ್ತದೆ’ ಎಂದರು.
 
‘ಕ್ರೀಡಾಪಟುಗಳನ್ನು ಬಸ್ಸಿನಲ್ಲೇ ಕರೆದೊಯ್ಯಬೇಕು’ ಎಂದು ಆಯೋಜಕರಿಗೆ ಸೂಚಿಸಿದರು. ಇದರ ಜವಾಬ್ದಾರಿಯನ್ನು ಕೋಚ್‌ ಮತ್ತು ಆಯೋಜಕರಿಗೆ ವಹಿಸಿದರು. ‘ಅನುಮತಿ ಇಲ್ಲದೇ ಕ್ರೀಡಾಪಟುಗಳು ಸುತ್ತಾಡಲು ಹೋಗುವುದನ್ನು ತಡೆಯಬೇಕು’ ಎಂದು ಸೂಚಿಸಿದರು. 
 
ಭದ್ರತೆ ಪರಿಶೀಲನೆ ವೇಳೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ನಗರಠಾಣೆ ಸಿಪಿಐ ಒಡೆಯರ್, ರಾಜ್ಯಸಭಾ ಮಾಜಿ ಸದಸ್ಯ ಎಚ್‌. ಹನುಮಂತಪ್ಪ, ಮಾದಾರ ಚನ್ನಯ್ಯ ಸ್ವಾಮೀಜಿ, ಸುರೇಶ್ ಬಾಬು ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.