ಚಿತ್ರದುರ್ಗ: ‘ಟಿಪ್ಪು ಜಯಂತಿ ವಿರೋಧಿಸುವವರಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಸಮಾಜದಲ್ಲಿ ಶಾಂತಿ ಕಾಪಾಡಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ, ಭದ್ರತೆಯೊಂದಿಗೆ ಜಯಂತಿ ಆಚರಿಸಬೇಕಾಗಿರುವುದು ದುರದೃಷ್ಟಕರ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ವಿಷಾದಿಸಿದರು.
ನಗರದಲ್ಲಿ ಜಿಲ್ಲಾಡಳಿತ ಶುಕ್ರವಾರ ಆಯೋಜಿಸಿದ್ದ ಟಿಪ್ಪು ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ‘ನಮ್ಮ ಜಿಲ್ಲೆ ಶಾಂತಿಯ ನೆಲೆವೀಡು. ಎಲ್ಲೂ ಕೋಮುಗಲಭೆಯಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಹಾಗಾಗಿ ನಿಷೇಧಾಜ್ಞೆ ಹಾಗೂ ಇಷ್ಟೊಂದು ಬಿಗಿ ಬಂದೋಬಸ್ತ್ ಅವಶ್ಯಕತೆ ಇರಲಿಲ್ಲ ಎಂದು ಜನರು ಹೇಳುತ್ತಿದ್ದರು.
ಆದರೆ, ಗುಪ್ತಚರ ಇಲಾಖೆ ಜಿಲ್ಲಾಡಳಿತಕ್ಕೆ ಏನು ಮಾಹಿತಿ ಕೊಟ್ಟಿತ್ತೋ ಗೊತ್ತಿಲ್ಲ. ಅಧಿಕಾರಿಗಳು ಆ ಪ್ರಕಾರ ಶಾಂತಿ ಕಾಪಾಡಲು ಕ್ರಮ ಕೈಗೊಂಡಿದ್ದಾರೆ. ವಿರೋಧಿಸುವವರು ವಿರೋಧಿಸಲಿ ಎಂದು ಸುಮ್ಮಿನಿದ್ದಿದ್ದರೆ ಏನೂ ಆಗುತ್ತಿರಲಿಲ್ಲ. ನಿಷೇಧಾಜ್ಞೆ ಹೇರುವ ಮೂಲಕ ವಿರೋಧಿಗಳಿಗೆ ಪ್ರಚಾರ ಕೊಟ್ಟಂತಾಯಿತು’ ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.