ADVERTISEMENT

‘ಪಿಯು ಫಲಿತಾಂಶ ಉತ್ತಮಗೊಳಿಸಲು ಶ್ರಮಿಸಿ’

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:16 IST
Last Updated 19 ಮೇ 2017, 5:16 IST

ಚಿತ್ರದುರ್ಗ: ಮುಂದಿನ ವರ್ಷದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ತಂದುಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಉಪನ್ಯಾಸಕರು ಈಗಿನಿಂದಲೇ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸಲಹೆ ನೀಡಿದರು.

ಡಾನ್‌ಬಾಸ್ಕೊ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ 2017 – 18 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರಿಗಾಗಿ ಹಮ್ಮಿಕೊಂಡಿದ್ದ 12 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದ್ವಿತೀಯ ಪಿಯು ಫಲಿತಾಂಶದಲ್ಲಿ 30 ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 25 ನೇ ಸ್ಥಾನಕ್ಕೆ ಏರಿರುವುದು ದೊಡ್ಡ ಸಾಧನೆಯಲ್ಲ. ಫಲಿತಾಂಶದಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ಆಗಬೇಕಾಗಿದ್ದು, ಎನ್‌ಸಿಇಆರ್‌ಟಿ ಪಠ್ಯ ಕ್ರಮವನ್ನು ರಾಜ್ಯ ಪಠ್ಯ ಕ್ರಮಕ್ಕೆ ಅಳವಡಿಸಿಕೊಂಡು ಅವಕಾಶದಿಂದ ವಂಚಿತರಾಗಿರುವ ಗ್ರಾಮೀಣ ಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸಬೇಕಿದೆ ಎಂದು ತಿಳಿಸಿದರು.

ADVERTISEMENT

ಕಲಾ ವಿಭಾಗದಲ್ಲಿ ಅರ್ಥಶಾಸ್ತ್ರ, ವಿಜ್ಞಾನದಲ್ಲಿ ಗಣಿತ ಕಬ್ಬಿಣದ ಕಡಲೆ ಎಂಬ ಮನಸ್ಥಿತಿ ಬಹುತೇಕ ವಿದ್ಯಾರ್ಥಿಗಳಲ್ಲಿದೆ. ಅದನ್ನು  ಮನದಲ್ಲಿ ಟ್ಟುಕೊಂಡು ಜಿಲ್ಲೆಯ ವಿದ್ಯಾರ್ಥಿಗಳನ್ನು ಎಲ್ಲ ವಿಷಯಗಳಲ್ಲೂ ಚಾಣಕ್ಯರನ್ನಾಗಿ ಮಾಡುವ ಹೊಣೆ ಹೊರಬೇಕು ಎಂದು ಸೂಚಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಭಗವಂತ ಕಟ್ಟಿಮನಿ ಮಾತನಾಡಿ, ‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗಬೇಕೆಂಬ ದೃಷ್ಟಿಯಿಂದ ರಾಜ್ಯದಲ್ಲಿ ಈಗಾಗಲೇ ರಾಷ್ಟ್ರೀಯ ಪಠ್ಯ ಕ್ರಮವನ್ನು ವಿಜ್ಞಾನ ವಿಭಾಗದಲ್ಲಿ ಅಳವಡಿಸಲಾಗಿದೆ. ಪಿಯು ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿ ಗಳನ್ನು ಸಜ್ಜುಗೊಳಿಸಬೇಕಾಗಿದೆ’ ಎಂದು ಹೇಳಿದರು.

ಡಾನ್‌ಬಾಸ್ಕೊ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಫಾದರ್ ಮರಿಯಾ ವಿನ್ಸೆಂಟ್, ಅರ್ಥಶಾಸ್ತ್ರ ವೇದಿಕೆ ಜಿಲ್ಲಾಧ್ಯಕ್ಷ ಟಿ.ಪಿ.ಜ್ಞಾನಮೂರ್ತಿ, ಪ್ರಾಚಾರ್ಯರಾದ ಎಚ್.ಎಸ್. ಶಾಂತ ರಾಜಯ್ಯ, ಎಚ್.ಟಿ. ಚಂದ್ರಶೇಖರಯ್ಯ, ಗುರುಸ್ವಾಮಿ ಇದ್ದರು. ಅರ್ಥಶಾಸ್ತ್ರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಲಕ್ಷ್ಮಣ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.