ADVERTISEMENT

ಬರ ನಿರ್ವಹಣೆಯಲ್ಲಿ ಸರ್ಕಾರಗಳು ವಿಫಲ

ಸಿಪಿಐ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಕಾರ್ಯದರ್ಶಿ ಲೋಕೇಶ್ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 5:35 IST
Last Updated 21 ಫೆಬ್ರುವರಿ 2017, 5:35 IST
ಚಿತ್ರದುರ್ಗದಲ್ಲಿ ಸೋಮವಾರ ನಡೆದ ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಪಿ.ವಿ. ಲೋಕೇಶ್ ಮಾತನಾಡಿದರು.
ಚಿತ್ರದುರ್ಗದಲ್ಲಿ ಸೋಮವಾರ ನಡೆದ ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಪಿ.ವಿ. ಲೋಕೇಶ್ ಮಾತನಾಡಿದರು.   

ಚಿತ್ರದುರ್ಗ: ‘ರಾಜ್ಯದಲ್ಲಿ ಎದುರಾಗಿರುವ ಭೀಕರ ಬರವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್ ಆರೋಪಿಸಿದರು.

ನಗರದ ಎಪಿಎಂಸಿ ಆವರಣದಲ್ಲಿನ ದಲ್ಲಾಲರ ಭವನದಲ್ಲಿ ಸೋಮವಾರ ನಡೆದ ಸಿಪಿಐ ರಾಜ್ಯ ಕಾರ್ಯಕಾರಿ ಸಭೆ ಉದ್ಘಾಟಿಸಿ ಮಾತನಾಡಿದರು.

‘ಯಡಿಯೂರಪ್ಪ ಡೈರಿ ಬಿಡುಗಡೆ ಮಾಡುತ್ತೇನೆಂದರೆ, ಸಿದ್ದರಾಮಯ್ಯ ಸಿಡಿ ಬಿಡುಗಡೆ ಮಾಡುತ್ತಾರೆ. ಹೀಗೆ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಾ, ಕಚ್ಚಾಡುತ್ತಾ, ರಾಜ್ಯದಲ್ಲಿನ ಬರಗಾಲ ವನ್ನು ಮರೆತು ರೈತರನ್ನು ನಿರ್ಲಕ್ಷ್ಯಿಸಿ ದ್ದಾರೆ. ಯಾರಿಗೂ ಜನಪರ, ರೈತಪರ ಕಾಳಜಿಯಿಲ್ಲ’ ಎಂದು ಟೀಕಿಸಿದರು.

‘ಬರಗಾಲದಿಂದಾಗಿ ಜನರಿಗೆ ಉದ್ಯೋಗವಿಲದೇ ಗುಳೆ ಹೋಗುತ್ತಿದ್ದಾರೆ. ಜನ-ಜಾನುವಾರಿಗೆ ಆಹಾರ ಸಮಸ್ಯೆ ಉದ್ಭವಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಸಾಲಮನ್ನಾ  ವಿಷ ಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಳು ಗೊಂದಲದ ಹೇಳಿಕೆ ನೀಡು ತ್ತಿವೆ. ರಾಜ್ಯ ಸರ್ಕಾರ ಈ ಬಜೆಟ್‌ ನಲ್ಲಿ ಸಾಲಮನ್ನದ ಬಗ್ಗೆ ಪ್ರಕಟಿಸಿ ರೈತ ಕಾಳಜಿ ಪ್ರದರ್ಶಿಸಬೇಕು’ ಎಂದು ಆಗ್ರಹಿಸಿದರು.

“ನೋಟು ಅಮಾನ್ಯ ಸಂದರ್ಭದಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದರು. ಇದರಿಂದ ತೊಂದರೆಯಾಗಿದ್ದು ಅಸಂಘಟಿತ ಕಾರ್ಮಿಕ ವಲಯಕ್ಕೆ. ಆದ್ದ ರಿಂದ ಇಂಥ ಲಕ್ಷಾಂತರ ಕಾರ್ಮಿಕರಿಗೆ ಸರ್ಕಾರ ಜೀವನ ಭದ್ರತೆ ನೀಡಬೇಕು’ ಎಂದು ಆಗ್ರಹಿಸಿದರು.

ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ‘ಜನರ ಸಮಸ್ಯೆ ಪರಿಹರಿಸಲು ಬೇರೆ ಸರ್ಕಾರಗಳನ್ನು ಅಧಿಕಾರಕ್ಕೆ ತರುವು ದನ್ನು ಬಿಟ್ಟು, ಕಾರ್ಮಿಕರು ಸಂಘಟಿತರಾಗಿ ಕಮ್ಯೂನಿಸ್ಟ್ ಪಕ್ಷವನ್ನೇ ಆಡಳಿತಕ್ಕೆ ತರುವ ಪ್ರಯತ್ನ ನಡೆಸಬೇಕು. ಈ ಮೂಲಕ ಅಸಂಘಟಿತ ವಲಯಕ್ಕೆ ನ್ಯಾಯ ಸಿಗುವಂತೆ ಮಾಡಬೇಕು’ ಎಂದರು.

ಜಾಗತೀಕರಣದ ಪರಿಣಾಮ ಚಳ್ಳಕೆರೆಯಲ್ಲಿ ಎಣ್ಣೆ ಗಿರಣಿಗಳು, ದಾವಣ ಗೆರೆಯಲ್ಲಿ ಜವಳಿ ಮಿಲ್‌ಗಳು ಬಾಗಿಲು ಹಾಕಿವೆ. ಇದರಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದವು. ಇಂದಿಗೂ ಅವರ ಜೀವನ ಪರಿಸ್ಥಿತಿ ಸುಧಾರಿಸಿಲ್ಲ. ಇವತ್ತಿಗೂ ದೇಶದಲ್ಲಿ ಜೀತ ಪದ್ಧತಿ ಇದೆ ಎಂದು ಕೇಂದ್ರ ಕಾರ್ಮಿಕ ಸಚಿವರು ನೀಡಿರುವ ಅಂಕಿ ಅಂಶ ಗಳಿಂದ ಖಚಿತವಾಗುತ್ತಿದೆ. ಇಂಥ ಪರಿ ಸ್ಥಿತಿಗೆ ತಂದು ಒಡ್ಡಿದ ಸರ್ಕಾರಗಳನ್ನು ಕೆಳಗಿಳಿಸಿ, ಕಮ್ಯೂನಿಸ್ಟ್ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು’ ಎಂದರು. 

ಕಾರ್ಯಕ್ರಮದಲ್ಲಿ ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಅಜೀಜ್ ಪಾಷ, ಜಿ ಕಾರ್ಯದರ್ಶಿ ಸಿ.ವೈ.ಶಿವರುದ್ರಪ್ಪ, ಸಹಕಾರ್ಯದರ್ಶಿ ಸುರೇಶ್ ಬಾಬು, ಎಚ್.ಕೆ. ರಾಮಚಂದ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.