ಚಿಕ್ಕಜಾಜೂರು: ಚಿಕ್ಕಜಾಜೂರಿನ ರೈಲ್ವೆ ನಿಲ್ದಾಣದ ಸಮೀಪದಲ್ಲಿ ನಿರ್ಮಿಸಿರುವ ಸಂಪರ್ಕ ಕೆಳ ಸೇತುವೆ ಸಮಸ್ಯೆಗೆ ಕೊನೆಗೂ ರೈಲ್ವೆ ಇಲಾಖೆ ಮತ್ತು ಗುತ್ತಿಗೆದಾರರು ಸ್ಪಂದಿಸುತ್ತಿದ್ದಾರೆ. ವಾರದಿಂದ ನೀರನ್ನು ಹೊರಗೆ ಹಾಕಲು ಕಾಮಗಾರಿ ಆರಂಭಿಸಿ, ತಳಕ್ಕೆ ಕಾಂಕ್ರೀಟ್ ಹಾಕಲಾಗಿದೆ.
ಸೋಮವಾರ ಕೊಳವೆ ಅಳವಡಿಸುವ ಕಾರ್ಯ ನಡೆಯಿತು. ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು ಎಂದು ಈಶ್ವರಪ್ಪ ಆಮನಾಳ್, ಸಿ.ದಿವಾಕರ್, ಲೋಕೇಶ್, ಮಲ್ಲಿಕಾರ್ಜುನ, ಶಿವಕುಮಾರ್, ನಾಗರಾಜ್, ಬಸವರಾಜ್, ಶಂಕರ್, ಕಡೂರು, ಐಯ್ಯನಹಳ್ಳಿ, ಕಾಳಘಟ್ಟ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದೇ ಸಂದರ್ಭ ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಿ.ಸಿ.ಮೋಹನ್ ಹಾಗೂ ಗ್ರಾಮಸ್ಥರು ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಗ್ರಾಮದ ಹೊಸನಗರ ಬಡಾವಣೆ, ಕಾಳಘಟ್ಟ, ಐಯ್ಯನಹಳ್ಳಿ, ಕಡೂರು ಮೊದಲಾದ ಗ್ರಾಮಗಳಿಗೆ ಸಂಚರಿಸಲು, ರೈಲು ನಿಲ್ದಾಣದ ಸಮೀಪ ಕೆಳ ಸೇತುವೆ ನಿರ್ಮಿಸಲಾಗಿತ್ತು. ಮಳೆ ಬಂದಾಗ ಸೇತುವೆಯ ಕೆಳಗೆ ಸಾಕಷ್ಟು ನೀರು ನಿಂತು ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿತ್ತು. ಈ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ ಯಲ್ಲಿ ವರದಿ ಪ್ರಕಟವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.