ಧರ್ಮಪುರ: ರಾಜ್ಯ ವಸತಿ ನಿಲಯದಲ್ಲಿ ದಲಿತರಿಗೆ ಕಳಪೆ ಆಹಾರ, ಹಾಸಿಗೆ, ದಿಂಬು ಮತ್ತು ಬೆಡ್ಸೀಟ್ ನೀಡುವ ಅನುದಾನದಲ್ಲಿ ಅವ್ಯವಹಾರ ನಡೆದಿದ್ದು, ಅದಕ್ಕೆಲ್ಲ ಕಾರಣರಾಗಿರುವ ಸಚಿವ ಎಚ್.ಆಂಜನೇಯ ಅವರನ್ನು ಪಕ್ಷದಲ್ಲಿ ಇಟ್ಟುಕೊಳ್ಳದೇ ವಜಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಯುವ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರವಣಗೆರೆ ಎನ್.ಶಿವಣ್ಣ ಆಗ್ರಹಿಸಿದ್ದಾರೆ.
ಬುಧವಾರ ಕರ್ನಾಟಕ ಮಾದಿಗ ಯುವ ಸೇನೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು. ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಹೊಳಲ್ಕೆರೆ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತ ಮತ್ತು ಮಾಜಿ ಶಾಸಕ ಎ.ವಿ.ಉಮಾಪತಿ ಹಾಗೂ ಕೆಪಿಸಿಸಿ ಸದಸ್ಯ ಡಾ.ತಿಪ್ಪೆಸ್ವಾಮಿಯವರನ್ನು ಅವಮಾನಿಸಿರುವುದು ಈ ಜಿಲ್ಲೆಯ ಗೊಲ್ಲ ಮತ್ತು ಮಾದಿಗ ಜನಾಂಗಕ್ಕೆ ಮಾಡಿರುವ ಅವಮಾನ. ಅನೇಕ ವರ್ಷಗಳಿಂದ ಈ ಎರಡು ಜನಾಂಗದವರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಟಾವಂತರಾಗಿ ದುಡಿದಿದ್ದಾರೆ ಎಂದು ಹೇಳಿದರು.
ಸಚಿವರಾಗುವ ಮೊದಲು ಆಂಜನೇಯ ಅವರ ಸ್ಥಿರಾಸ್ತಿ ಎಷ್ಟಿತ್ತು ಮತ್ತು ನಂತರ ಅವರ ಆಸ್ತಿ ಎಷ್ಟಿದೆ ಎಂಬುದು ಬಹಿರಂಗ ಘೋಷಣೆಯಾಗಬೇಕು. ಇಂತಹ ಭ್ರಷ್ಟ ಮಂತ್ರಿ ನಮ್ಮ ಪಕ್ಷದಲ್ಲಿದ್ದರೆ ಬಹುದೊಡ್ಡ ಹೊಡೆತ. ಅದಕ್ಕಾಗಿ ಮುಖ್ಯಮಂತ್ರಿಗಳು ಸಚಿವ ಇವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಮಾದಿಗ ಯುವ ಸೇನೆ ಆಗ್ರಹಿಸಿದೆ.\
ಪ್ರತಿಭಟನೆಯಲ್ಲಿ ರಮೇಶ್, ಮಹಾಂತೇಶ್, ರವಿಶಂಕರ, ರಂಗನಾಥ್, ಹನುಮಂತರಾಯ, ಓಬಳೇಶ್, ಮೂರ್ಕಣಪ್ಪ, ರವಿಚಂದ್ರ, ಅರುಣ್ ಕುಮಾರ್, ಸಂತೋಷ್, ರಂಗಸ್ವಾಮಿ, ಮೂರ್ತಿ, ಶಿವಲಿಂಗಪ್ಪ, ಮಧು, ವಿರೂಪಾಕ್ಷಪ್ಪ, ನಾಗರಾಜ್, ಕೃಷ್ಣಪ್ಪ, ದೇವರಾಜ್, ಗೋವಿಂದಪ್ಪ, ಚಂದ್ರಪ್ಪ, ಕರಿಸ್ವಾಮಿ, ಬಸವರಾಜು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.