ಧರ್ಮಪುರ: ಹೋಬಳಿಯ ಬಹತೇಕ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಲ್ಲಿ ಭಾರಿ ಮಳೆ ಸುರಿದಿದೆ. ಗೋಕಟ್ಟೆ, ಚೆಕ್ ಡ್ಯಾಂಗಳು ತುಂಬಿಕೊಂಡಿದ್ದು, ಕೆಲವು ಕೆರೆಗಳಿಗೆ ನೀರು ಬಂದಿದೆ. ಹೋಬಳಿಯು ಐದಾರು ವರ್ಷಗಳಿಂದ ಮಳೆ ಸರಿಯಾಗಿ ಬಂದಿರಲಿಲ್ಲ. ಇದೀಗ ಸತತ ಮೂರು ದಿನ ಮಳೆ ಸುರಿದಿರುವುದು ಜನರಲ್ಲಿ ಸಂತಸವನ್ನು ಉಂಟು ಮಾಡಿದೆ. ಅಬ್ಬಿನಹೊಳೆ, ಈಶ್ವರಗೆರೆ, ರಂಗೇನಹಳ್ಳಿ, ಅರಳೀಕೆರೆ, ಹಲಗಲದ್ದಿ, ಬೇತೂರು, ಚಿಲ್ಲಹಳ್ಳಿ, ಹೂವಿನಹೊಳೆ ಭಾಗದಲ್ಲಿ ಭಾರಿ ಮಳೆಯಾಗಿದೆ.
ಕಳಪೆ ಕಾಮಗಾರಿ: ಈಶ್ವರಗೆರೆ–ವೇಣುಕಲ್ಲುಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣವಾಗಿ ಒಂದು ವರ್ಷವೂ ಕಳೆದಿಲ್ಲ. ಆದರೆ, ಮಳೆಯಿಂದಾಗಿ ಸಂಪೂರ್ಣವಾಗಿ ಹಾಳಾಗಿದೆ. ಸೇತುವೆ ಮಳೆಗೆ ಕೊಚ್ಚಿಹೋಗಿ ಸಂಪರ್ಕ ಕಡಿದಿದೆ ಎಂದು ಗ್ರಾಮದ ಕಾಮರಾಜ್ ಆರೋಪಿಸಿದ್ದಾರೆ.
ರೈತರಿಗೆ ಸಂತಸ: ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ನಡೆಯುತ್ತಿತ್ತು. ಕಳೆದ ಒಂದು ವಾರದಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಒಡ್ಡು, ಗೋಕಟ್ಟೆ, ಚೆಕ್ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿರುವುದರಿಂದ ಕೊಳವೆ ಬಾವಿಗಳಲ್ಲಿ ಅತರ್ಜಲ ಹೆಚ್ಚಿ ಕುಡಿಯುವ ನೀರು ಸಮಸ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಬ್ಯಾಡರಹಳ್ಳಿ ಶಿವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.