ADVERTISEMENT

‘ಹಲ್ಲು ಹುಳುಕಾದರೆ ಹೊಟ್ಟೆಗೂ ಸಮಸ್ಯೆ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 3:54 IST
Last Updated 19 ಏಪ್ರಿಲ್ 2017, 3:54 IST
ಪರಶುರಾಂಪುರ:  ‘ಈಚಿನ ದಿನಗಳಲ್ಲಿ ಆಹಾರ ಪದಾರ್ಥ ಬೆಳೆಯಲು ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಲಾಗುತ್ತಿದೆ. ಇದರಿಂದ ಪೌಷ್ಟಿಕಾಂಶದ ಕೊರತೆಯಾಗಿ, ಹಲ್ಲುಗಳು ಜಗಿಯುವ ಸಾಮರ್ಥ್ಯ ಕಳೆದುಕೊಳ್ಳುತ್ತಿವೆ.

ಜೀರ್ಣಕ್ರಿಯೆಯೂ ಸಮರ್ಪಕವಾಗದೇ ಮಲಬದ್ಧತೆ, ಮೂಲವ್ಯಾಧಿಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ’ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
 
ಗ್ರಾಮದ ವಾಸವಿ ಮಹಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ‘ದಂತಭಾಗ್ಯ’ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಈಗಿನ ದಿನಗಳಲ್ಲಿ ಚಿಕ್ಕ ಮಕ್ಕಳಿಗೇ ಹುಳುಕು ಹಲ್ಲುಗಳು ಕಾಣಿಸಿಕೊಳ್ಳುತ್ತಿವೆ.

ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಪೋಷಕರ ಪಾತ್ರ ಅತೀ ಮುಖ್ಯ. ಹಲ್ಲುಗಳ ಆರೋಗ್ಯ ಚೆನ್ನಾಗಿದ್ದರೆ ಬಹುತೇಕ ಕಾಯಿಲೆಗಳಿಂದ ದೂರವಿರಬಹುದು’ ಎಂದು ಅವರು ತಿಳಿಸಿದರು.
 
ಶಾಸಕ ಟಿ.ರಘುಮೂರ್ತಿ ಮಾತನಾಡಿ, ‘ಗ್ರಾಮೀಣ ಭಾಗದ ಹಿರಿಯರಿಗೆ ದಂತಭಾಗ್ಯ ಯೋಜನೆಯು ಸಹಕಾರಿಯಾಗಿದೆ’ ಎಂದು ಹೇಳಿದರು.
ನೋಡಲ್ ಅಧಿಕಾರಿ ಡಾ.ಸಚಿನ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಶಿಬಿರದಲ್ಲಿ ಅರ್ಹ 15 ಪಲಾನುಭವಿಗಳಿಗೆ ಉಚಿತವಾಗಿ ದಂತಪಂಕ್ತಿ’ ಎಂದು ತಿಳಿಸಿದರು.
 
ಎಸ್‌ಜೆಎಂ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಾಟಯ್ಯ, ಉಪಾಧ್ಯಕ್ಷೆ ಲಕ್ಷ್ಮೀದೇವಿ, ತಾಲ್ಲೂಕು ಪಂಚಾಯ್ತಿ  ಸದಸ್ಯೆ ವಿಜಯಲಕ್ಷ್ಮಿ, ಎಪಿಎಂಸಿ ಸದಸ್ಯ ಎಸ್.ಚನ್ನಕೇಶವ, ಜಿಲ್ಲಾ ಪಂಚಾಯ್ತಿ ಕೆಡಿಪಿ ಸದಸ್ಯ ಜಯವೀರಾಚಾರಿ, ಎಸ್‌ಜೆಎಂ ಆಡಳಿತಾಧಿಕಾರಿ ಡಾ.ಚಿತ್ರಶೇಖರ್, ಡಾ.ಚೌಡಪ್ಪ ಗುಪ್ತಾ, ಕಾಂಗ್ರೆಸ್ ಮುಖಂಡ ಪ್ರಭುದೇವ ಇದ್ದರು.
 
ಜಿಲ್ಲಾ ಪಂಚಾಯ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎಸ್‌ಜೆಎಂ ದಂತ ಮಹಾವಿದ್ಯಾಲಯ ಹಾಗೂ ರಾಜೀವ್ ಗಾಂಧಿ ಯುವ ಶಕ್ತಿ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.