ಮೊಳಕಾಲ್ಮುರು: ತಾಲ್ಲೂಕಿನ ರಾಂಪುರದಲ್ಲಿ ಹಳೆ ಪೊಲೀಸ್ ಠಾಣೆ ಕಟ್ಟಡ ನೆಲಸಮಗೊಳಿಸದ ಪರಿಣಾಮ ಇದಕ್ಕೆ ಹೊಂದಿಕೊಂಡು ಹಿಂಬದಿಯಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಗೋಚರಿಸುತ್ತಿಲ್ಲ. ಬೆಂಗಳೂರು–ಬಳ್ಳಾರಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಈ ಪೊಲೀಸ್ ಠಾಣೆ ನಿರ್ಮಿಸಲಾಗಿದೆ.
ಹಳೆ ಕಟ್ಟಡ ಹಿಂಭಾಗದಲ್ಲಿ ನೂತನ ಕಟ್ಟಡ ನಿರ್ಮಿಸಿ ಮೂರು ವರ್ಷ ಕಳೆದಿದೆ. ಮುಖ್ಯರಸ್ತೆಯಲ್ಲಿ ನಿಂತುಕೊಂಡರೆ ಹೊಸ ಕಟ್ಟಡ ಕಾಣುವುದೇ ಇಲ್ಲ ಎಂದು ಹಿರಿಯ ವಕೀಲ ಆರ್.ಎಂ.ಅಶೋಕ್ ಹೇಳಿದರು.
ಹೊಸ ಕಟ್ಟಡದಲ್ಲಿ ಠಾಣೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಿಳಿದಿ ಲ್ಲದವರು, ಆರಂಭದಲ್ಲಿಯೇ ಕಾಣಸಿಗುವ ಬಾಗಿಲು ಹಾಕಿ ದೂಳುಮಯವಾಗಿರುವ ಹಳೆ ಕಟ್ಟಡವನ್ನು ನೋಡಿ ಠಾಣೆ ಮುಚ್ಚಿದೆ ಎಂದುಕೊಂಡು ವಾಪಸು ಹೋದ ಉದಾಹರಣೆಗಳು ಸಾಕಷ್ಟಿವೆ. ತುರ್ತು ಕೆಲಸಕ್ಕಾಗಿ ಅದರಲ್ಲೂ ರಾತ್ರಿ ವೇಳೆ ಠಾಣೆಗೆ ಬರುವವರಿಗೆ ಇದರಿಂದ ತೊಂದರೆಯಾಗಿದೆ ಎಂದರು.
ಈ ಹಿಂದೆ ಮಾಧ್ಯಮಗಳಲ್ಲಿ ಹಳೆ ಕಟ್ಟಡದಿಂದ ಆಗುತ್ತಿರುವ ತೊಂದರೆ ಬಗ್ಗೆ ವರದಿಗಳು ಬಂದಾಗ ಹಳೆ ಕಟ್ಟಡ ಕೆಡವಲು ಇಲಾಖೆ ಹಿರಿಯ ಅಧಿಕಾರಿಗಳಿಗೆ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಅಲ್ಲಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿತ್ತು. ಆದರೆ, ಯಥಾಸ್ಥಿತಿ ಮುಂದುವರಿದಿದೆ.
ಹಳೆ ಕಟ್ಟಡ ನೆಲಸಮ ಮಾಡಲು 3–4 ಬಾರಿ ಮನವಿ ಸಲ್ಲಿಸಲಾಗಿದೆ, ಮೇಲಧಿಕಾರಿಗಳಿಂದ ಉತ್ತರ ಬಂದಿಲ್ಲ. ಲೋಕೋಪಯೋಗಿ ಇಲಾಖೆ ಅನುಮತಿ ಇದಕ್ಕೆ ಅಗತ್ಯವಿದೆ. ಅನುಮತಿ ದೊರೆತ ತಕ್ಷಣ ನೆಲಸಮ ಮಾಡಿಸಲಾಗುವುದು ಎಂದು ಪಿಎಸ್ಐ ಲೋಕೇಶ್್ ತಿಳಿಸಿದರು.