ADVERTISEMENT

ಕುಕ್ಕೆ: ಅವಭೃತೋತ್ಸವ, ನೌಕಾವಿಹಾರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 5:58 IST
Last Updated 26 ನವೆಂಬರ್ 2017, 5:58 IST
ಸುಬ್ರಹ್ಮಣ್ಯ ಕುಮಾರಧಾರಾ ನದಿಯಲ್ಲಿ ಶನಿವಾರ ದೇವರ ಅವಭೃತೋತ್ಸವ ನಡೆಯಿತು.
ಸುಬ್ರಹ್ಮಣ್ಯ ಕುಮಾರಧಾರಾ ನದಿಯಲ್ಲಿ ಶನಿವಾರ ದೇವರ ಅವಭೃತೋತ್ಸವ ನಡೆಯಿತು.   

ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ  ಶನಿವಾರ ಕುಮಾರಾಧಾರಾದಲ್ಲಿ ಶ್ರೀ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಿತು.

ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಅವರು ಅವಭೃತೋತ್ಸವದ ಧಾರ್ಮಿಕ ವಿದಿವಿಧಾನ ನೆರವೇರಿಸಿದರು. ಸಹಸ್ರಾರು ಭಕ್ತರು ಭಾಗವಹಿಸಿ ಪುಣ್ಯಸ್ನಾನ ಮಾಡಿದರು.

ಬೆಳಿಗ್ಗೆ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ಮತ್ತು ಓಕುಳಿ ಚೆಲ್ಲಾಟ ನೆರವೇರಿತು. ಓಕುಳಿ ಸಮರ್ಪಣೆಯಾಗಿ ಭಕ್ತರಿಗೆ ಪ್ರೋಕ್ಷಣೆ ಮತ್ತು ಓಕುಳಿ ಚೆಲ್ಲಾಟ ನಡೆಯಿತು. ದೇವರ ಅವಭೃತೋತ್ಸವ ಸವಾರಿ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು.

ADVERTISEMENT

ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ದೇವರ ನೌಕಾವಿಹಾರ ನಡೆಯಿತು. ಜಳಕದಗುಂಡಿಯಲ್ಲಿ  ಅವಭೃತೋತ್ಸವವನ್ನು ಪ್ರಧಾನ ಅರ್ಚಕರು ನೆರವೇರಿಸಿದರು. ನದಿ ತೀರದ ಅವಭೃತಕಟ್ಟೆಯಲ್ಲಿ ದೇವರಿಗೆ ವಿಶೇಷ ಕಟ್ಟೆಪೂಜೆ ನೆರವೇರಿತು. ಗಜರಾಣಿ ‘ಯಶಸ್ವಿ’ ಎಲ್ಲರಂತೆ  ಸ್ನಾನ ಮಾಡಿ ಜಲಕ್ರೀಡೆಯಲ್ಲಿ ಸಂಭ್ರಮಿಸಿತು.

ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್. ಸಹಾಯಕ ಕಾರ್ಯ ನಿರ್ವಹ ಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಗೌಡ ಬಳ್ಳೇರಿ, ಮಾಧವ.ಡಿ, ಮಾಸ್ಟರ್‍ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.