ADVERTISEMENT

ಜನಪರ ಮರಳು ನೀತಿಗೆ ಕಟ್ಟಡ ಕಾರ್ಮಿಕರ ಮನವಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 7:02 IST
Last Updated 27 ಜುಲೈ 2017, 7:02 IST

ಮಂಗಳೂರು:  ಕರಾವಳಿ ಜಿಲ್ಲೆಗಳಲ್ಲಿ ಹೇರಳವಾಗಿ ದೊರೆಯುತ್ತಿದ್ದ ಮರಳಿನ ಮೇಲಿನ ನಿಷೇಧದ ಹೆಸರಿನಲ್ಲಿ ಜಿಲ್ಲೆಯ ಕಾಮಗಾರಿಗಳಿಗೆ ಮರಳು ಸರಿಯಾಗಿ ಪೂರೈಕೆಯಾಗದೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ. ಜನಪರ ಮರಳು ನೀತಿ ಜಾರಿಗೆ ತರುವಂತೆ ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಮರಳಿನ ಮೇಲಿನ ನಿಷೇಧದ ನೆಪವಾಗಿ ಮಾಡಿಕೊಂಡು, ಕರಾವಳಿ ಜಿಲ್ಲೆಯಲ್ಲಿ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ₹3,500ಕ್ಕೆ ಸಿಗುತ್ತಿದ್ದ 2 ಯುನಿಟ್‌ ಮರಳು, ₹12ಸಾವಿರಕ್ಕೆ ಏರಿಕೆಯಾಗಿದೆ. ಜಿಲ್ಲೆಯ ನಾನಾ ಕಡೆಗಳಲ್ಲಿ ಮರಳು ವ್ಯಾಪಕವಾಗಿ ಶೇಖರಣೆಯಾಗಿದ್ದರೂ, ಜಿಲ್ಲೆಯ ಕಾಮಗಾರಿಗಳಿಗೆ ಇದು ಉಪಯೋಗವಾಗುತ್ತಿಲ್ಲ. ರಾಜ್ಯದ ಇತರ ಜಿಲ್ಲೆಗಳಿಗೆ ಹಾಗೂ ಇತರೆ ರಾಜ್ಯಗಳಿಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ದೂರಿದರು.

ಮರಳು ತೆಗೆಯುವಲ್ಲಿ ಡೋಸರ್ ಹಾಗೂ ಜೆಸಿಬಿ ಬಳಕೆ ನಿಷೇಧಿಸಲಾಗಿದ್ದರೂ, ಎಲ್ಲೆಡೆ ಜೆಸಿಬಿ ಹಾಗೂ ಡೋಸರ್ ಬಳಕೆ ಮಾಡಲಾಗುತ್ತಿದೆ. ಸ್ಥಳೀಯ ಆಡಳಿತಕ್ಕೆ ಗೊತ್ತಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದೆ. ಇದೆಲ್ಲವನ್ನು ಗಮನಿಸಿದಾಗ ಜಿಲ್ಲೆಯ ಜನತೆ ಜಿಲ್ಲಾಡಳಿತದ ಮೇಲೆ ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ ಎಂದರು.

ADVERTISEMENT

ಜಿಲ್ಲೆಯ ಕಟ್ಟಡ ಮತ್ತು ನಿರ್ಮಾಣ ಕಾಮಗಾರಿಗಳಿಗೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗುವಂತೆ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ನೀಡಬೇಕು. ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಮರಳು ದಂಧೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಏಕರೂಪದ ಮರಳು ದರ ನಿಗದಿಯಾಗಬೇಕು. ಇದೆಲ್ಲವನ್ನು ಒಳಗೊಂಡಂತೆ ಜಿಲ್ಲೆಗೆ ಜನಪರ ಮರಳು ನೀತಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ವಸಂತ ಆಚಾರಿ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಮುಖಂಡರಾದ ಜಯಂತ್ ನಾಯ್ಕ್, ಜನಾರ್ದನ್‌ ಕುತ್ತಾರ್, ಜಯಶೀಲ, ಮನೋಜ್ ವಾಮಂಜೂರು, ಪ್ರೇಮನಾಥ್ ಜಲ್ಲಿಗುಡ್ಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.