ADVERTISEMENT

‘ಟಿಪ್ಪುವಿನ ಇತಿಹಾಸ ತಿರುಚುವುದು ಸಲ್ಲ’

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 8:31 IST
Last Updated 11 ನವೆಂಬರ್ 2017, 8:31 IST

ಮಂಗಳೂರು: ‘ರಾಜಕೀಯ ಲಾಭ ಕ್ಕಾಗಿ ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್‌ ನೆಹರೂ ಅವರ ಇತಿಹಾಸ ತಿರುಚಿದವರೇ ಈಗ ಟಿಪ್ಪು ಸುಲ್ತಾನ್‌ ಚರಿತ್ರೆಯನ್ನೂ ತಿರುಚಲು ಹೊರಟಿದ್ದಾರೆ. ಇದು ಖಂಡನೀಯ ನಡೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂ ಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಜರತ್‌ ಟಿಪ್ಪು ಸುಲ್ತಾನ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಟಿಪ್ಪು ತನ್ನ 15ನೇ ವಯಸ್ಸಿನಿಂದಲೇ ಬ್ರಿಟಿಷರ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿದ. ದೇಶದಿಂದ ಬ್ರಿಟಿಷರನ್ನು ಹೊರಹಾಕಲು ನಿರಂತರವಾಗಿ ಪ್ರಯ ತ್ನಿಸಿದ. ಆಗಿನ ಇತಿಹಾಸಕಾರರು ಯಾವ ಲೋಪವೂ ಇಲ್ಲದೇ ಇದನ್ನು ದಾಖಲು ಮಾಡಿದ್ದರು. ಆದರೆ, ಈಗ ಕೆಲವರು ತಮ್ಮ ಮೂಗಿನ ನೇರಕ್ಕೆ ಇತಿಹಾಸ ತಿರುಚಲು ಹೊರಟಿದ್ದಾರೆ. ಟಿಪ್ಪು ಹಿಂದೂ ವಿರೋಧಿ, ಮತಾಂಧ, ಬಲ ವಂತದ ಮತಾಂತರ ಮಾಡಿಸಿದ್ದ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.

ADVERTISEMENT

ಮರಾಠಾ ಪೇಶ್ವೆ ಶೃಂಗೇರಿ ಶಂಕರಾ ಚಾರ್ಯ ಮಠ ಮತ್ತು ಶಾರದಾಂಬ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದಾಗ ರಕ್ಷಣೆ ಕೊಟ್ಟದ್ದು ಟಿಪ್ಪು ಎಂಬುದನ್ನು ಐತಿಹಾಸಿಕ ದಾಖಲೆಗಳು ಸಾರಿ ಹೇಳುತ್ತವೆ. ಪೇಶ್ವೆಯ ದಾಳಿಯಿಂದ ಜರ್ಝರಿತಗೊಂಡಿದ್ದ ಶೃಂಗೇರಿಯ ಜೀರ್ಣೋದ್ಧಾರಕ್ಕೆ ನೆರವು ನೀಡಿದ್ದು ಟಿಪ್ಪು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೂ ನೆರವು ನೀಡಿದ್ದ ಎಂಬ ಉಲ್ಲೇಖವಿದೆ. ಆತ ರಾಜನ ಸ್ಥಾನದಲ್ಲಿ ಇದ್ದುಕೊಂಡು ಸಾಮಾಜಿಕ ಸಾಮರಸ್ಯ ವೃದ್ಧಿಗೆ ನೀಡಿದ ಕೊಡುಗೆ ಅಸಾಧಾರಣವಾದುದು ಎಂದು ಹೇಳಿದರು.

‘ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರು ಟಿಪ್ಪು ಸುಲ್ತಾನ್‌ ನನ್ನು ಕೊಂಡಾಡಿದರು. ಆತನೊಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದ್ದರು. ಆದರೆ, ಕೆಲವರಿಗೆ ಈ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದರು.

ವಿರೋಧಿಸಿದವರಿಗೆ ಅಭಿನಂದನೆ: ಮುಖ್ಯ ಅತಿಥಿಯಾಗಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಾತನಾಡಿ, ‘ಗಾಂಧಿಯನ್ನು ಅವಹೇಳನ ಮಾಡುವವರು ಮತ್ತು ಗಾಂಧಿಯವರನ್ನು ಕೊಂದವರನ್ನು ವೈಭವೀಕರಿಸುವ ಜನರು ಈಗ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ. ಗೋಡ್ಸೆಯನ್ನು ವೈಭವೀಕರಿಸಿ ನಾಟಕ ಪ್ರದರ್ಶನ ನೀಡುವವರು, ಸಿನಿಮಾ ಮಾಡುವವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಕೆಲವರು ಟಿಪ್ಪು ಜಯಂತಿಯನ್ನು ವಿರೋಧಿಸದೇ ಇದ್ದರೆ ಈ ಕಾರ್ಯ ಕ್ರಮಕ್ಕೆ ಇಷ್ಟೊಂದು ಪ್ರಚಾರ ಸಿಗುತ್ತಿರಲಿಲ್ಲ. ವಿರೋಧದ ಕಾರಣದಿಂ ದಾಗಿಯೇ ಈಗ ಜನಮನದಲ್ಲಿ ಟಿಪ್ಪುವಿನ ಕುರಿತು ಗಂಭೀರ ಚರ್ಚೆ, ಜಿಜ್ಞಾಸೆ ಆರಂಭವಾಗಿದೆ. 15 ದಿನಗಳಿಂದ ಟಿಪ್ಪು ಜಯಂತಿ ಚರ್ಚೆಯಲ್ಲಿದೆ. ಈ ರೀತಿಯ ಪ್ರಚಾರ ದೊರೆಯಲು ಕಾರಣರಾದ ವಿರೋಧಿಗಳನ್ನು ನಾನು ಅಭಿನಂದಿಸುತ್ತೇನೆ’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿ ಸಿದ್ದ ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೊ ಮಾತನಾಡಿ, ‘ಆಡಳಿತದ ಚುಕ್ಕಾಣಿ ಹಿಡಿದ ವ್ಯಕ್ತಿ ಆಗಿನ ಕಾಲಮಾನಕ್ಕೆ ತಕ್ಕಂತೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳ ಬೇಕಾ ಗುತ್ತದೆ. ಅದರಲ್ಲಿ ತಪ್ಪುಗಳನ್ನೇ ಮುಂದಿ ಟ್ಟುಕೊಂಡು ಆತ ಮಾಡಿದ್ದ ಒಳ್ಳೆಯ ಕೆಲಸಗಳನ್ನು ನಿರಾಕರಿಸುವುದು ಸರಿಯಲ್ಲ. ಇತಿಹಾಸದಲ್ಲಿ ಎಲ್ಲವೂ ಒಳ್ಳೆಯದೇ ಆಗಿರಲು ಸಾಧ್ಯವಿಲ್ಲ’ ಎಂದರು.

‘ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ದೇಶದ ಒಳತಿಗಾಗಿ ತುರ್ತು ಪರಿಸ್ಥಿತಿ ಜಾರಿಗೆ ತಂದರು. ಆದರೆ, ಅವರ ಅಧಿನದಲ್ಲಿದ್ದ ಕೆಲವರು ಅದನ್ನು ತಪ್ಪಾಗಿ ಅನುಷ್ಠಾನಗೊಳಿಸಿದರು. ಅದರಿಂದ ಆದ ಕೆಡುಕುಗಳಿಗೆ ಇಂದಿರಾ ಅವರನ್ನು ಹೊಣೆ ಮಾಡಲಾಗದು. ಟಿಪ್ಪುವಿನ ವಿಚಾರದಲ್ಲೂ ಹಾಗೆಯೇ ಆಗಿದೆ. ರಾಜನ ಅಧೀನದಲ್ಲಿದ್ದವರು ಮಾಡಿದ ತಪ್ಪಿಗೆ ರಾಜನನ್ನೇ ಹೊಣೆ ಮಾಡುವುದು ಸಾಧ್ಯವಿಲ್ಲ’ ಎಂದು ಹೇಳಿದರು.

ಶಾಸಕ ಬಿ.ಎ.ಮೊಯಿದ್ದೀನ್ ಬಾವ ಮಾತನಾಡಿ, ‘ಕೆಲವರು ರಾಜಕೀಯ ಉದ್ದೇಶಕ್ಕಾಗಿ ಟಿಪ್ಪು ಸುಲ್ತಾನ್‌ ವ್ಯಕ್ತಿತ್ವಕ್ಕೆ ಕಳಂಕ ಅಂಟಿಸಲು ಹೊರಟಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗಲು ಬಿಡಬಾರದು. ಟಿಪ್ಪುವಿನ ನಿಜವಾದ ಇತಿಹಾಸವನ್ನು ಜನರ ಮುಂದಿಡುವ ಪ್ರಯತ್ನ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು’ ಎಂದರು.

ಶಾಸಕಿ ಶಕುಂತಳಾ ಟಿ.ಶೆಟ್ಟಿ, ಮಂಗ ಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ಮಂಗಳೂರು ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್‌ ಬಲ್ಲಾಳ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌.ಖಾದರ್, ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಶಾಹುಲ್‌ ಹಮೀದ್‌, ಮಂಗಳೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಜಿಲ್ಲಾ ಹಜ್‌ ಸಮಿತಿ ಅಧ್ಯಕ್ಷ ವೈ.ಮಹಮ್ಮದ್ ಕುಂಞಿ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ.ಎಂ.ಆರ್‌.ರವಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.