ADVERTISEMENT

ತಂತ್ರಾಂಶ ಲೋಕಾರ್ಪಣೆ

ತುಳು ಭಾಷೆಯ ತೌಳವ 2.0

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2014, 8:33 IST
Last Updated 12 ಡಿಸೆಂಬರ್ 2014, 8:33 IST

ಮಂಗಳೂರು: ರಾಷ್ಟ್ರೀಯ ಕಂಪ್ಯೂಟರ್‌ ಸಾಕ್ಷರತಾ ಸಮಿತಿಯ ಸಹಯೋಗದೊಂದಿಗೆ ರೂಪಿಸಲಾದ ‘ತೌಳವ 2.0’ ಸುಧಾರಿತ ಕಂಪ್ಯೂಟರ್‌ ತಂತ್ರಾಂಶವನ್ನು ಗುರುವಾರ ಪತ್ರಿಕಾ ಭವನದಲ್ಲಿ ಲೋಕಾರ್ಪಣೆ ಮಾಡಲಾಯಿತು.

ತಂತ್ರಾಂಶದ ವಿನ್ಯಾಸ, ನಿರ್ಮಾಣ ಹಾಗೂ ನಿರ್ದೇಶಕ ಪ್ರವೀಣ್‌ರಾಜ್‌ ಎಸ್‌ ರಾವ್‌ ಮಂಜೇಶ್ವರ ಮಾತನಾಡಿ, 2009ರಲ್ಲಿ ಪ್ರಾಯೋಗಿಕ ತಂತ್ರಾಂಶ ‘ತೌಳವ 1.0’ ಅನ್ನು ಅಭಿವೃದ್ಧಿಪಡಿಸಲಾಗಿತ್ತು. ಇದರಲ್ಲಿ ಅನೇಕ ತೊಡಕುಗಳು ಇರುವುದನ್ನು ಗಮನಿಸಿ ಮುಂದುವರೆದ ಭಾಗವಾಗಿ ತೌಳವ 2.0 ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಾಂಶವನ್ನು ವಿಂಡೋಸ್‌ನ ಯಾವುದೇ ಆಪರೇಟಿಂಗ್‌ ಸಿಸ್ಟಂನಲ್ಲಿ ಬಳಸಬಹುದು. ತಂತ್ರಾಂಶವನ್ನು ವಿಶ್ವ ತುಳುವರೆ ಪರ್ಬದಲ್ಲಿ ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಈ ತಂತ್ರಾಂಶವು ನುಡಿ ತಂತ್ರಾಂಶದಂತೆಯೇ ಕಾರ್ಯನಿರ್ವಹಿಸಲಿದೆ. ತುಳುವಿಗೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬುದರ ಕುರಿತು ಚರ್ಚೆ ನಡೆಯುತ್ತಿರುವ ವೇಳೆಗೆ ನಮ್ಮ ಈ ತೌಳವ ತಂತ್ರಾಂಶ ತುಳು ಭಾಷೆಗೆ ಸಲ್ಲಿಸುವ ಅಳಿಲು ಸೇವೆಯಾಗಿದೆ ಎಂದು ಹೇಳಿದರು

ತೌಳವ ತಂತ್ರಾಂಶವನ್ನು ತಯಾರಿಸುವಲ್ಲಿ ಸತ್ಯಶಂಕರ, ಪ್ರದೀಪ್‌ ಕಿರಣ್‌ ಡಿಸೋಜ, ಶಿವರಾಮ ಹಂದೆ ರೇಣು ಘಾಟೆ, ವಿವೇಕ್‌ ಆಚಾರ್ಯ, ರಾಮಚಂದ್ರ ಉಚ್ಚಿಲ್‌, ಗಣೇಶ್‌ ರೈ ನೀರ್ಚಾಲ್‌ ಅವರು ತಾಂತ್ರಿಕವಾಗಿ ನೆರವಾಗಿದ್ದಾರೆ. ಹಾಗೆಯೇ ಭಾಷಾತಜ್ಞರಾದ ಡಾ.ವೆಂಕಟರಾಜ ಪುಣಿಂಚಿತ್ತಾಯ, ಡಾ.ರಾಧಾಕೃಷ್ಣ ಬೆಳ್ಳೂರು, ಡಾ.ವಿಘ್ನರಾಜ್‌ ಧರ್ಮಸ್ಥಳ, ಡಾ. ಪದ್ಮನಾಭ ಕೇಕುಣ್ಣಾಯ ಅವರು ಸಹಕಾರ ನೀಡಿದ್ದಾರೆ ಎಂದರು.

ತಂತ್ರಾಂಶ ಅಭಿವೃದ್ಧಿಯಲ್ಲಿ ಸಹಕರಿಸಿದ ಸತ್ಯಶಂಕರ, ಪ್ರದೀಪ್‌ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.