ADVERTISEMENT

‘ಪಂಪನು ಕರುಣರಸದಲ್ಲಿ ಚಿತ್ರಿಸಿದ ಕರ್ಣ’

​ಪ್ರಜಾವಾಣಿ ವಾರ್ತೆ
Published 20 ಮೇ 2017, 4:47 IST
Last Updated 20 ಮೇ 2017, 4:47 IST

ಮೂಡುಬಿದಿರೆ: ‘ಆದಿಪುರಾಣ' ಮಹಾಕಾವ್ಯವನ್ನು ಬರೆದ ಪಂಪ ಮಹಾಕವಿಯು ಬಳಿಕ ಅರಿಕೇಸರಿಯ ವಿನಂತಿಯಂತೆ ಆತನ ಮಿತ್ರನಾಗಿ ಹಾಗೂ ಆಸ್ಥಾನ ಕವಿಯಾಗಿಯೂ ಸೇರಿ ಕೊಂಡನು. ಆದಿಪುರಾಣದಂತಹ ಇನ್ನೊಂದು ಕಾವ್ಯವನ್ನು ಬರೆಯುವಂತೆ ಯೂ ಮತ್ತು ಅದು ತನ್ನನ್ನು ಹೊಗಳಿ ಬರೆಯುವಂತಹ ಕಾವ್ಯವಾಗವಾಗ ಬಾರದೆಂಬ ಅರಿಕೇಸರಿಯ ಕೇಳಿಕೆ ಯಂತೆ ಪಂಪನು ಕರ್ಣನನ್ನೇ ಕೇಂದ್ರವಾ ಗಿಟ್ಟುಕೊಂಡು 'ವಿಕ್ರಮಾರ್ಜುನ ವಿಜಯ' ಎಂಬ ವಿಶ್ವಮಾನ್ಯ ಕಾವ್ಯವನ್ನು ಸೃಷ್ಟಿಸಿದನು ಎಂದು ಸಾಹಿತಿ, ಶಿಕ್ಷಣತಜ್ಞ, ಡಾ. ವಿಶ್ವನಾಥ ಕಾರ್ನಾಡ್‌ ಮುಂಬೈ ಹೇಳಿದರು.

ಕಾಂತಾವರ ಕನ್ನಡ ಸಂಘದಲ್ಲಿ ಬುಧವಾರ ನಡೆದ ತಿಂಗಳ ನುಡಿನಮನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು 'ಪಂಪನ ಕರ್ಣರಸಾಯನ' ಎಂಬ ವಿಷಯದ ಕುರಿತು ಮಾತನಾಡಿದರು.

ವ್ಯಾಸಭಾರತದಲ್ಲಿ ಕರ್ಣ ಒಂದು ಪಾತ್ರವಾಗಿ ಮಾತ್ರ ಚಿತ್ರಿತವಾದರೆ, ಪಂಪನ 'ವಿಕ್ರಮಾರ್ಜುನ ವಿಜಯ'ದ ಕರ್ಣನ ಪಾತ್ರವು ಹಿಂದಿನ ಎಲ್ಲಾ ಕವಿಗಳಿಂದ  ಹಿಡಿದು ಆಧುನಿಕ ಕವಿಗಳ ತನಕ ಇಡೀ ವಿಶ್ವವೇ ಕೊಂಡಾಡುವಂತೆ ಮಾಡಿದೆ. ಇಲ್ಲಿ ಕರ್ಣ ಅನ್ಯಾಯ ಎಸಗಿದ್ದು ಕಡಿಮೆಯಾಗಿ ಆತನಿಗಾದ ಅನ್ಯಾಯವೇ ಹೆಚ್ಚು ಎಂಬುದನ್ನು ಚಿತ್ರಿಸಲಾಗಿದೆ ಮತ್ತು ಪಂಪನು ಕರ್ಣ ನನ್ನು ದುಷ್ಟಚತುಷ್ಪಯದಲ್ಲಿ ಸೇರಿಸದೆ ಆತನನ್ನು ತನ್ನ ಕಾವ್ಯದ ಮಹಾಪಾತ್ರ ವನ್ನಾಗಿಸಿ ಮತ್ತು ದುರಂತ ಪಾತ್ರವನ್ನಾ ಗಿಯೂ ಚಿತ್ರಿಸಿ ಎಲ್ಲರೂ ಮೆಚ್ಚಿಕೊ ಳ್ಳುವಂತೆ ಮಾಡಿದ್ದಾನೆ ಎಂದರು.

ADVERTISEMENT

ಮಹಾಭಾರತವು  ಒಂದರ್ಥದಲ್ಲಿ ಕರ್ಣಾರ್ಜುನರ ಯುದ್ಧವೇ ಆಗಿದ್ದು, ಪಂಪನು ಕರ್ಣನ  ಅವಸಾನ  ಕಾಲದ ಸನ್ನಿವೇಶವನ್ನು ಕರುಣರಸದಿಂದ ತುಂಬಿಸಿ ಕರ್ಣನನ್ನು ತನ್ನ ಸ್ವಭಾವ, ತ್ಯಾಗ, ವೀರತ್ವಗಳಿಂದ ಉಜ್ವಲೀಕರಿಸಿ ಶಾಶ್ವತೀಕರಿಸಿದ್ದಾನೆ ಎಂದು ಹೇಳಿದರು.

ಬಾಬು ಶೆಟ್ಟಿ ನಾರಾವಿ ನಿರೂಪಿಸಿದರು. ಡಾ.ನಾ.ಮೊಗಸಾಲೆ ಸ್ವಾಗತಿಸಿದರು. ಸದಾನಂದ ನಾರಾವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.