ಮೂಲ್ಕಿ: ‘ರಾಜಕೀಯವಾಗಿಯೂ ಮುಕ್ತವಾದ ಅವಕಾಶವನ್ನು ಬ್ರಾಹ್ಮಣ ವರ್ಗ ಪಡೆಯುವಂತಾಗಬೇಕು, ಸಮುದಾಯದ ಸಂಘಟನೆಗಳು ಸದೃಢವಾದಲ್ಲಿ ಸಮಾಜಕ್ಕೂ ಉತ್ತಮವಾದ ನಾಯಕರನ್ನು ನೀಡುವಂತಹ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಉದ್ಯಮಿ ಅಗರಿ ಸಂಸ್ಥೆಯ ರಾಘವೇಂದ್ರ ರಾವ್ ಹೇಳಿದರು.
ಮೂಲ್ಕಿ ಬಳಿಯ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಭಾನುವಾರ ನಡೆದ ವಿಪ್ರ ಸಂಪದ ಆಶ್ರಯದಲ್ಲಿ ವಿಪ್ರ ಸಮಾಗಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಧಾರ್ಮಿಕ ಚಿಂತಕ ಕೊಲಕಾಡಿ ವಾದಿರಾಜ ಉಪಾಧ್ಯಾಯ ಉಪನ್ಯಾಸ ನೀಡಿ, ಬ್ರಾಹ್ಮಣರೆಂದು ಹೇಳಿಕೊಳ್ಳಲು ಹೆಮ್ಮೆ ಇರಲಿ. ಹಿಂಜರಿಕೆ ಬೇಡ ನಮ್ಮಲ್ಲಿನ ಸಂಘಟನಾ ಶಕ್ತಿಯನ್ನು ಸಹ ಸಾಮರಸ್ಯದ ಮೂಲಕ ಇನ್ನಷ್ಟು ಬಲಪಡಿಸಬೇಕಾಗಿದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ‘ಯುವಕರನ್ನು ಹೆಚ್ಚಾಗಿ ಸಮಾಜದ ಎಲ್ಲಾ ವಿಭಾಗಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರ ನೀಡಿರಿ’ ಎಂದರು. ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ನೀಡಲಾಯಿತು.
ಜಿಲ್ಲಾ ಸಾಹಿತ್ಯ ಪರಷತ್ತಿನ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಉದ್ಯಮಿ ಕೃಷ್ಣ ಕದ್ರಿ, ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ವಿಪ್ರ ಸಂಪದದ ಜನಕರಾಜ ರಾವ್, ಸುರೇಶ್ ರಾವ್, ಪಟೇಲ್ ವೆಂಕಟೇಶ ರಾವ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ, ಮಹಿಳಾ ವೇದಿಕೆಯ ವಿನುತಾ ರಾವ್, ಪದಾಧಿಕಾರಿಗಳಾದ ಅವಿನಾಶ್ ರಾವ್, ರಾಘವೇಂದ್ರ ರಾವ್, ಚಂದ್ರಶೇಖರ ರಾವ್, ಸುಧಾಕರ ರಾವ್, ಶ್ರೀರಕ್ಷ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.