ADVERTISEMENT

ಸಾಹಿತಿ ಸಮಾಜವನ್ನು, ಸಮಾಜ ಸಾಹಿತಿಗಳನ್ನು ಕಾಯಬೇಕು

ಮೂಡುಬಿದಿರೆ: 12ನೇ ಆಳ್ವಾಸ್‌ ನುಡಿಸಿರಿಯ ಸರ್ವಾಧ್ಯಕ್ಷ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 6:02 IST
Last Updated 27 ನವೆಂಬರ್ 2015, 6:02 IST

ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆ (ಮೂಡುಬಿದಿರೆ): ‘ಸಮಾಜ ಸಾಹಿತಿಗಳ ಹಿತ ಕಾಯಬೇಕು, ಸಾಹಿತಿಗಳು ಸಮಾಜದ ಹಿತ ಕಾಯ­ಬೇಕು. ಎರಡೂ ಕಡೆಗೂ ತಾಳ್ಮೆ ಸಂಯಮ ಸಮಾಧಾನಗಳು ಅವಶ್ಯ­ವಾಗಿರಬೇಕು. ಇದಕ್ಕಾಗಿ ಸರ್ಕಾರದ ನಾಯಕತ್ವವೂ, ಸಾಮಾಜಿಕ ನಾಯಕ­ತ್ವವೂ ಒಗ್ಗೂಡಿ ಶ್ರಮಿಸಬೇಕು’ ಎಂದು 12ನೇ ಆಳ್ವಾಸ್‌ ನುಡಿಸಿರಿಯ ಅಧ್ಯಕ್ಷ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಪ್ರತಿಪಾದಿಸಿದರು.

ಗುರುವಾರ ಸಂಜೆ ಚಾಲನೆಗೊಂಡ 12ನೇ ಆಳ್ವಾಸ್‌ ನುಡಿಸಿರಿಯ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಈಚಿನ ಕೆಲವು ವರ್ಷಗಳಲ್ಲಿ ನಡೆದಿರುವ ಬುದ್ಧಿಜೀವಿ­ಗಳ, ವಿಚಾರವಾದಿಗಳ, ಸಾಹಿತಿಗಳ ಮೇಲಿನ ಹಲ್ಲೆಗಳು ಅತ್ಯಂತ ದುಃಖಕರ, ಖಂಡನಾರ್ಹ, ಶಿಕ್ಷಾರ್ಹ. ಅನ್ಯಾಯವಾಗಿ ಈಚೆಗೆ ನಮ್ಮ ನಡುವಿನ ಕ್ರಿಯಾಶೀಲ ಸಂಶೋಧಕ ಮಿತ್ರ ಎಂ.­ಎಂ. ಕಲಬುರ್ಗಿ ಅವರನ್ನು ನಾವು ಕಳೆದು­ಕೊಂಡೆವು. ಇಂತಹ ಘಟನೆಗಳು ಮರುಕಳಿಸಬಾರದು’ ಎಂದರು.

‘ಯಾವುದೋ ಮತದ, ಪಂಥದ ಆಚಾರ ವಿಚಾರಗಳು ಮೇಲೆಂದೂ ಕೀಳೆಂದೂ ತೆಗಳುವುದು, ಯಾವುದೋ ಸ್ಮೃತಿಯಲ್ಲಿ ಬಂದಿರುವ ಯಾವುದೋ ವಿಚಾರ ಅಸಮಾನತೆ, ಅಸಹಿಷ್ಣುತೆಗಳ ಭೇದಬುದ್ಧಿಯ ಪುರೋಹಿತಶಾಹಿ ವಿಚಾರ­ವೆಂದು ಗುರುತಿಸಿ ಯಾರನ್ನೋ ತರಾಟೆಗೆ ತೆಗೆದುಕೊಳ್ಳುವುದರಿಂದ ವರ್ತ­ಮಾನ ಸಮಾಜದ ಮೇಲೆ, ಸಮಾಜದ ಎಳೆಯ ಮನಸ್ಸುಗಳ ಮೇಲೆ ದ್ವೇಷಾಸೂಯೆಗಳ ವಿಷಬೀಜಗಳು ಬಿತ್ತುತ್ತವೆ. ಆದ್ದರಿಂದ ಮತದ, ಪಂಥದ ಆಚಾರ ವಿಚಾರಗಳನ್ನು ಮನೆಯ ಮಟ್ಟಿಗೆ, ಸಾಂಕೇತಿಕವಾಗಿ ಆಚರಿಸಿ­ಕೊಳ್ಳಬೇಕು’ ಎಂದು ಸಾರಿ ಹೇಳಿದರು.

‘ಸಮೂಹ ಮಾಧ್ಯಮಗಳಿಂದಾಗಿ ಪರಸ್ಪರವಾಗಿ ಅರಿವು ಸಂವಹನ ಸಂಪರ್ಕಗಳು ಸಾಧ್ಯವಾಗಿ ನಮ್ಮ ಭೌತಿಕ ಮತ್ತು ಬೌದ್ಧಿಕಜ್ಞಾನ ಬೆಳೆದಿರುವು­ದಂತೂ ನಿಜ. ಆದರೆ ನಮ್ಮ ಸಮುದಾಯದಲ್ಲಿ ಈ ಮಾಧ್ಯಮಗಳ ದುರುಪಯೋಗವೂ ಒಂದು ರೀತಿಯಲ್ಲಿ ಸಾಗಿದೆ; ಇವು ಸ್ವಾರ್ಥ, ವಿಲಾಸ, ಸಂಪತ್ತಿನ ಸೆಳೆತ, ಕಲೆ ಸಂಸ್ಕೃತಿಗಳ ಶೋಷಣೆ, ಇವುಗಳ ಚಕ್ರತೀರ್ಥದಲ್ಲಿ ವೇಗವೇಗವಾಗಿ ಸುತ್ತಲು ಸ್ಪರ್ಧಿಸುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಜನಸಮುದಾಯದ ಬಡತನ ಅಸಮಾನತೆಗಳ ನಿವಾರಣೆಯ ಉಪಾ­ಯ­ಗಳು, ಜ್ಞಾನ-ವಿವೇಕಗಳ ಹಾಗೂ ನೆಮ್ಮದಿ-ಅಭ್ಯುದಯಗಳ ಚಿಂತನ ಮಂ­ಥನ­ಗಳು. ಪರಿಣಾಮದಲ್ಲಿ ಸ್ವಚ್ಛ­ವಾದ, ಗಂಭೀರವಾದ, ಶಾಂತ­ವಾದ ಮನಃ­ಸ್ಥಿತಿಯ ಸಮಾಜ ನಿರ್ಮಾಣ ಮಾಡುವ ಕೆಲಸ ಆಗಬೇಕು’ ಎಂದರು.

‘ಸರ್ಕಾರದ ಸಗಟು ಖರೀದಿಯ ಬೆಂಬಲದಲ್ಲಿ ಪುಸ್ತಕಗಳ ಉತ್ಪಾದನೆ ಆಗುವಂತೆ ತೋರುತ್ತಿದೆ; ಬರೆಯುವಂತೆ ತೋರುತ್ತಿಲ್ಲ. ಹೀಗೆಯೇ ಪ್ರಾಯೋಜನೆ, ವಿಶೇಷ ಅನುದಾನಗಳ ಬಲದ ಮೇಲೆಯೂ ಇದು ನಡೆಯುತ್ತಿದೆ. ಕೆಲವು ಪ್ರಕಾಶನ ಸಂಸ್ಥೆಗಳು ಹೆಚ್ಚಿನ ಪ್ರಯೋಜನ ಪಡೆಯಲು ಏನೇನೋ ಅಡ್ಡದಾರಿಗಳನ್ನು ಕಂಡುಕೊಳ್ಳುತ್ತಿವೆ. ಹಿಂದೆ ಮೈಸೂರು ವಿಶ್ವವಿದ್ಯಾಲಯದ ಪ್ರಕಟಣೆ ಮಾಲೆಯ ಸಣ್ಣ ಪುಸ್ತಕಗಳೂ ದೊಡ್ಡ ಪುಸ್ತಕಗಳೂ ಕಠಿಣವಾದ ವಿಮರ್ಶೆಗೆ, ಪರಿಷ್ಕರಣಕ್ಕೆ ಒಳಗಾಗುವ ವ್ಯವಸ್ಥೆಯಿತ್ತು. ಆದರೆ ಅಂತಹ ವ್ಯವಸ್ಥೆ ದಿನೇ ದಿನೇ ಕಾಣೆಯಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ನಂಬಿಕೆ ಯಾವುದು, ಮೂಢ­ನಂಬಿಕೆ ಯಾವುದು, ಪ್ರಾಚೀನ ಕನ್ನಡ ಶಬ್ದ-ಶಾಸನ ಯಾವುದು. ಲಿಂಗಾ­ಯತವೇ-ವೀರಶೈವವೇ, ಟಿಪ್ಪು-ಹೈದರ್ ಆಡಳಿತ ಮತ್ತು ಜೀವನದೃಷ್ಟಿಯಲ್ಲಿ ಭಿನ್ನಾ­ಭಿಪ್ರಾಯಗಳು ಇವುಗಳ ಚರ್ಚೆ­ಯಲ್ಲಿ ಆಗಿರುವ ಕೋಲಾಹಲಗಳು ಅಷ್ಟಿಷ್ಟಲ್ಲ. ಸ್ವಹಿತಾಸಕ್ತಿ, ಸ್ವಮತಾಸಕ್ತಿ­ಗಳನ್ನು ದೂರವಿಟ್ಟು, ‘ನೆನೆಯದಿರಣ್ಣ ಸಂಗತದೊಳಿನ್ ಪೆಱತೇನುಮನೊಂದೆ ಚಿತ್ತದಿನ್| ನೆನೆವೊಡೆ ಸತ್ಯಮನ್ ನೆನೆಯ’ ಎಂಬ ಆದರ್ಶದಲ್ಲಿ ಮನಸ್ಸಿಟ್ಟು ಸಾಗಬೇಕು’ ಎಂದು ಹೇಳಿದರು.

ಕನ್ನಡ ಕಡ್ಡಾಯ ಮಾಡಿ; ಇಂಗ್ಲಿಷ್‌ ಕಲಿಸಿ: ‘ಕನ್ನಡ ಕೈತಪ್ಪಿ ಹೋಗದಿರ ಬೇಕಾದರೆ, ದುರ್ಬಲ­ವಾಗದಿರ­ಬೇಕಾ­ದರೆ ಭಾಷಿಕರಿರಲಿ, ಅನ್ಯಭಾಷಿಕ­ರಿರಲಿ, ಪ್ರೌಢಶಾಲೆಯ ಹಂತದವರೆಗೆ ಕಲಿಕೆಯ ಮಾಧ್ಯಮ ಕನ್ನಡದಲ್ಲಿಯೇ ನಡೆಯುವು­ದನ್ನು ಸಮರ್ಥಿಸಬೇಕು, ಸಾಧಿಸಬೇಕು. ಈ ಘಟ್ಟದಲ್ಲಿಯೇ ಸಂಪರ್ಕಸೇತುವಾಗಿ, ಮಾನವಿಕ ಮತ್ತು ವಿಜ್ಞಾನ ವಿಷಯಗಳಿಗೆ ಬೇಕಾಗುವ ಇಂಗ್ಲಿಷ್ ಭಾಷೆಯನ್ನು ಒಂದು ಕಲಿಕೆಯ ಭಾಷೆಯ ಸ್ಥಾನದಲ­ರಿಸಿ ಚೆನ್ನಾಗಿಯೇ ಕಲಿಸುವುದಾಗಬೇಕು’ ಎಂದು ಪ್ರತಿಪಾದಿಸಿದರು.

ಸಮಾಧಾನವಾಗುವ ಪರಿಹಾರ ಹುಡುಕಿ:  ‘ನದಿ ನೀರಿನ ಸಮಸ್ಯೆಯ ಹೋರಾ­ಟ­ದಲ್ಲಿ ತಮಿಳುನಾಡು ಸಾಮಾನ್ಯವಾಗಿ ಗೆಲವು ಸಾಧಿಸುತ್ತ, ಕಾವೇರಿ ನದಿಯ ನೀರಿನ ಹಂಚಿಕೆ ವಿವಾದವಾಗಿಯೇ ಉಳಿದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಹದಾಯಿ-ಮಲಪ್ರಭಾ ನದಿಗಳ ಕಳಸಾ-ಬಂಡೂರಿ ನಾಲೆಗಳ ಸಂಬಂಧ­ದಲ್ಲಿ ರಾಜ್ಯಗಳ ನಡುವೆ ತಿಕ್ಕಾಟವಿದೆ.

ಮಧ್ಯ ಮತ್ತು ದಕ್ಷಿಣ ಕರ್ನಾಟಕದಲ್ಲಿ ಬಯಲು­ಸೀಮೆಯ ಕೆಲವು ಜಲಾಭಾವದ ಜಿಲ್ಲೆಗಳಿಗೆ ನೀರಿನ ಹರಿವು-ನೇತ್ರಾ­ವತಿಯ ಕೆಲವು ಉಪನದಿಗಳ ನೀರಿನ ಬಳಕೆ ಎಂಬುದರ ಸಂಬಂಧದಲ್ಲಿ ಚಳವಳಿಗಳು ನಡೆಯುತ್ತಿವೆ. ಪರಿಸರ ಸಂರಕ್ಷಣೆಯ ನ್ಯಾಯವಾದ ನಿಲವಿನಲ್ಲಿ ಪರಿಸರವಾದಿಗಳೂ ಹೋರಾಟದ ಕಣದಲ್ಲಿದ್ದಾರೆ. ಪರಿಸರತಜ್ಞರೂ ನೀರಾ­ವರಿ ವಿಭಾಗದ ವಿಜ್ಞಾನಿಗಳೂ, ರಾಜ­ಕಾರಣಿಗಳು ಜನರ ಸಹಕಾರ ಪಡೆದು ಎಲ್ಲರಿಗೂ ಸಮಾಧಾನವಾಗುವಂತೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ­ಬೇಕಾಗಿದೆ’ ಎಂದು ಹೇಳಿದರು.

8ನೇ ಪರಿಚ್ಛೇದಕ್ಕೆ ತುಳು: ಒತ್ತಡ ತರಬೇಕು
‘ತುಳುನಾಡಿನ ದೇಸಿಯಿರುವುದು ತುಳುಭಾಷೆಯಲ್ಲಿ, ಅದರ ಸಾಹಿತ್ಯವೂ ಈಗ ಸಮೃದ್ಧಿಯತ್ತ ಸಾಗುತ್ತಿದೆ; ತುಳು ಭಾಷೆಯಾಡುವ ಜನಸಂಖ್ಯೆಯೂ ಸುಮಾರು 5 ಲಕ್ಷವನ್ನು ದಾಟಿದೆ. ಮಧ್ಯದ್ರಾವಿಡದ ವಿಶೇಷತೆಯಿಂದ ಸ್ವತಂತ್ರವಾಗಿರುವ ಈ ಭಾಷೆ ನಮ್ಮ ಸಂವಿಧಾನದ 8ನೇ ಪರಿಚ್ಛೇದದನ್ವಯ ಅಧಿಕೃತ ಸ್ಥಾನ ಪಡೆಯಬೇಕೆಂಬುದರಲ್ಲಿ ಯಾವ ರಾಜಕೀಯವೂ ಇಲ್ಲದ ಒತ್ತಡವನ್ನು ನಾವು ಕೇಂದ್ರ ಸರ್ಕಾರದ ಮೇಲೆ ತರಬೇಕಾಗಿದೆ ಎಂದು ವೆಂಕಟಾಚಲ ಶಾಸ್ತ್ರಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.