ADVERTISEMENT

‘ಹೊಸತನದ ಆವಿಷ್ಕಾರವೇ ವಿಜ್ಞಾನ’

ಪ್ರೊ.ಸಿ.ಎನ್‌.ಆರ್. ರಾವ್‌ ಅವರಿಂದ ಸುಳ್ಯದ ಸ್ನೇಹ ಶಾಲೆ ವಿಜ್ಞಾನ ಉದ್ಯಾನದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 12:59 IST
Last Updated 11 ಫೆಬ್ರುವರಿ 2017, 12:59 IST
ಸುಳ್ಯದ ಸ್ನೇಹ ಶಾಲೆಗೆ ಶುಕ್ರವಾರ ಭೇಟಿ ನೀಡಿದ ವಿಜ್ಞಾನಿ ಪ್ರೊ.ಸಿಎನ್‌ಆರ್ ರಾವ್ ಶಾಲಾ ಬಯಲು ಸೂರ್ಯಾಲಯವನ್ನು ವೀಕ್ಷಿಸಿದರು.
ಸುಳ್ಯದ ಸ್ನೇಹ ಶಾಲೆಗೆ ಶುಕ್ರವಾರ ಭೇಟಿ ನೀಡಿದ ವಿಜ್ಞಾನಿ ಪ್ರೊ.ಸಿಎನ್‌ಆರ್ ರಾವ್ ಶಾಲಾ ಬಯಲು ಸೂರ್ಯಾಲಯವನ್ನು ವೀಕ್ಷಿಸಿದರು.   

ಸುಳ್ಯ:  ವಿಜ್ಞಾನವೆಂಬುದು ಒಂದು ಕರ್ತವ್ಯ. ಅದು ಹೊಸತನದ ಆವಿಷ್ಕಾರ. ಒಂದು ಪ್ರಶ್ನೆಗೆ ಉತ್ತರ ದೊರೆತ ಕೂಡಲೇ ಹತ್ತಾರು ಪ್ರಶ್ನೆಗಳು ಹುಟ್ಟಿ ಕೊಳ್ಳುವುದು ವಿಜ್ಞಾನದಲ್ಲಿ ಮಾತ್ರ ಸಾಧ್ಯ ಎಂದು ಭಾರತರತ್ನ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಹೇಳಿದರು.

ಸುಳ್ಯದ ಸ್ನೇಹ ಶಾಲೆಗೆ ಶುಕ್ರವಾರ ಭೇಟಿ ನೀಡಿದ ಅವರು ನೂತನ ವಿಜ್ಞಾನ ಉದ್ಯಾನದ ಉದ್ಘಾಟನೆ ನೆರವೇರಿಸಿ ‘ಶಿಕ್ಷಣ-ವಿಜ್ಜಾನ-ಸಂಶೋಧನೆ’ ವಿಚಾರ ವಾಗಿ ಉಪನ್ಯಾಸ ನೀಡಿದರು.

ಇದಕ್ಕೂ ಮೊದಲು ಶಾಲೆಯ ಶೈಕ್ಷಣಿಕ ವ್ಯವಸ್ಥೆಗಳಾದ ಗುರುಕುಲ, ಚೌಕಿ, ಕಲಾಶಾಲೆ, ವೃತ್ತಾಕಾರದ ಕೊಠಡಿಗಳು, ಬಯಲು ಸೂರ್ಯಾಲ ಯವನ್ನು ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದರು.

ADVERTISEMENT

‌ನನ್ನ ನಿರೀಕ್ಷೆ ಇರುವುದು ಗ್ರಾಮೀಣ ಭಾರತದಲ್ಲಿಯೇ ಹೊರತು ನಗರ ಭಾರತದಲ್ಲಿ ಅಲ್ಲ. ಕೇವಲ ಭಾಷಣಗ ಳಿಂದ, ರಾಜಕೀಯದಿಂದ ಅಭಿವೃದ್ದಿ ಸಾಧ್ಯವಿಲ್ಲ. ಅದಕ್ಕೆ ಕಠಿಣ ಕಾಯಕ ಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ‘ಪದ್ಮಶ್ರೀ' ಪ್ರಶಸ್ತಿಗೆ ಭಾಜನರಾದ ಸಂಸ್ಥೆಯ ಸ್ಥಾಪಕ ಕಾರ್ಯ ದರ್ಶಿ ಗಿರೀಶ್ ಭಾರದ್ವಾಜ್ ಅವರನ್ನು ಗೌರವಿಸಲಾಯಿತು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಬರೆದ ಡೋಂಟ್‌ಸೇ ಮೈ ಚೈಲ್ಡ್ ಈಸ್ ಮಿಲ್ಡ್' ಕೃತಿಯನ್ನು ಇಂದುಮತಿ ರಾವ್ ಬಿಡುಗಡೆ ಮಾಡಿದರು.

ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ.ಚಿದಾನಂದ ಕೊಳಂಬೆ ಪ್ರೊ.ಸಿ.ಎನ್.ಆರ್.ರಾವ್ ಅವರನ್ನು ಪರಿಚಯಿಸಿದರು. ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ, ಅಕ್ಷರ ದಾಮ್ಲೆ ಉಪಸ್ಥಿತರಿದ್ದರು.

ಡಾ.ಚಂದ್ರಶೇಖರ ದಾಮ್ಲೆ ಸ್ವಾಗತಿಸಿದರು. ಶಾಲಾ ಸಂಚಾಲಕ ಡಾ.ವಿದ್ಯಾ ಶಾಂಭವ ಪಾರೆ ವಂದಿಸಿದರು. ಸಮೀರ ದಾಮ್ಲೆ ನಿರೂಪಿಸಿದರು.

ಉಪನ್ಯಾಸದ ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ಸುಳ್ಯ ತಾಲ್ಲೂಕಿನ ಪದವಿಪೂರ್ವ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳು, ಆಸಕ್ತ ವಿಜ್ಞಾನ ಶಿಕ್ಷಕರು, ಪ್ರಾಧ್ಯಾಪಕರುಗಳು, ಪೋಷಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

– ಭಾರತಕ್ಕೆ ಹೆಚ್ಚು ನೊಬೆಲ್ ಪ್ರಶಸ್ತಿಗಳು ಬಾರದಿರುವುದಕ್ಕೆ ಹಲವು ಕಾರಣಗಳಿವೆ, ವಿಶ್ವವಿದ್ಯಾಲಯಗಳಿಗೆ ಸೂಕ್ತ ಹಣಕಾಸು ನೀಡಬೇಕು. ಒಳ್ಳೆಯ ಸಂಶೋಧನೆಗಳು ಹೊರಬರಬೇಕು.

– ಕನ್ನಡ ಮಾಧ್ಯಮಲ್ಲಿ ಶಿಕ್ಷಣ ಪಡೆಯುವವರು ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿಗ ಳಿಗಿಂತಲೂ ಸರಿಯಾಗಿ ಇಂಗ್ಲಿಷ್‌ನಲ್ಲಿ ಪ್ರಬುದ್ಧತೆ ಪಡೆಯಬೇಕು. ಆಗ ಯಶಸ್ವಿಯಾಗುತ್ತಾರೆ.

– ಎಂಡೋಸಲ್ಪಾನ್‌ನಲ್ಲಿ ಅಪಾಯಕಾರಿ ಅಂಶಗಳಿವೆ. ಇದರ ಅಪಾಯವನ್ನು ಸರ್ಕಾರಗಳು ಇನ್ನೂ ಸರಿಯಾಗಿ ಅರಿತುಕೊಂಡಿಲ್ಲ.

– ನಮ್ಮ ಮನೆಯಲ್ಲಿ ಜಗಳ ಇಲ್ಲ. ಹೀಗಾಗಿ ಸಂಶೋಧನೆಗೆ ಪೂರಕವಾದ ವಾತಾವರಣ ಇದೆ.

* ಗ್ರಾಮೀಣ ಭಾರತದಿಂದ ಮಾತ್ರ ಮತ್ತೊಬ್ಬ ನ್ಯೂಟನ್, ಮತ್ತೊಬ್ಬ ಪ್ಯಾರಡೆ ಬರಲು ಸಾಧ್ಯ
ಪ್ರೊ.ಸಿ.ಎನ್‌.ಆರ್‌.ರಾವ್‌, ಹಿರಿಯ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.