ADVERTISEMENT

₹2.5 ಲಕ್ಷ ಮೌಲ್ಯದ 5 ಕೆ.ಜಿ ಗಾಂಜಾ ವಶ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:39 IST
Last Updated 25 ಮೇ 2017, 5:39 IST

ಮಂಗಳೂರು: ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಉದಯ ನಾಯಕ್ ನೇತೃತ್ವದ ಪೊಲೀಸರ ತಂಡ, ಒಡಿಶಾದಿಂದ ನಗರಕ್ಕೆ ಗಾಂಜಾ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ಆರೋಪಿಗಳಿಂದ 5ಕೆ.ಜಿ. ಗಾಂಜಾ, ಮೊಬೈಲ್ ಹಾಗೂ ನಗದು ವಶಪಡಿಸಿ ಕೊಂಡಿದೆ.

ಒಡಿಶಾದ ಶಾಂತನು ಕುಮಾರ್ ಶಾಹು ಹಾಗೂ ಪಣಂಬೂರು ಮೀನ ಕಳಿಯದ ವಿಕ್ರಮ್ ಯಾನೆ ಜಯರಾಮ್ ಬಂಧಿತ ಆರೋಪಿಗಳು.

ಬುಧವಾರ ನಗರದ ಮಂಗಳಾ ಕ್ರೀಡಾಂಗಣದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹2.5 ಲಕ್ಷ ಮೌಲ್ಯದ 5 ಕೆ.ಜಿ. ಗಾಂಜಾ, ₹12 ಸಾವಿರ ಮೌಲ್ಯದ ಎರಡು ಮೊಬೈಲ್, ಗಾಂಜಾ ತೂಕ ಮಾಡುವ ಮಾಪಕ, ₹500 ನಗದು ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ರಿಕ್ಷಾ  ಸೇರಿದಂತೆ ಸುಮಾರು ಒಟ್ಟು ₹4,37,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಸಿಪಿ ಉದಯ ನಾಯಕ್ ಮಾರ್ಗದರ್ಶನದಲ್ಲಿ, ಬರ್ಕೆ ಠಾಣೆಯ ಇನ್‌ಸ್ಪೆಕ್ಟರ್ ರಾಜೇಶ್ ಎ.ಕೆ., ಬರ್ಕೆ ಠಾಣೆಯ ಅಪರಾಧ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ನರೇಂದ್ರ, ಎಎಸ್ಐ ಪ್ರಕಾಶ್, ಸಿಬ್ಬಂದಿ ಗಣೇಶ್, ರಾಜೇಶ್ ಅತ್ತಾವರ, ಕಿಶೋರ್ ಕೋಟ್ಯಾನ್, ಕಿಶೋರ್ ಪೂಜಾರಿ, ನಾಗರಾಜ, ಮಹೇಶ್ ಪಾಟೀಲ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.