ADVERTISEMENT

ಅಸಮರ್ಪಕ ಪಡಿತರ ಪದಾರ್ಥ ವಿತರಣೆ: ಗ್ರಾಮಸ್ಥರ ದೂರು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 9:51 IST
Last Updated 17 ನವೆಂಬರ್ 2017, 9:51 IST

ಚನ್ನಗಿರಿ: ತಾಲ್ಲೂಕು ಜೋಳದಹಾಳ್ ಗ್ರಾಮದ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಸಮರ್ಪಕವಾಗಿ ಪಡಿತರ ಪದಾರ್ಥಗಳನ್ನು ವಿತರಣೆ ಮಾಡುತ್ತಿಲ್ಲ ಎಂದು ದೂರಿ ಗ್ರಾಮಸ್ಥರು ಗುರುವಾರ ಪಟ್ಟಣದ ಆಹಾರ ಇಲಾಖೆ ಕಚೇರಿಯ ಮುಂದೆ ಗದ್ದಲ ಮಾಡಿದರು.

ಇಲ್ಲಿಯ ನ್ಯಾಯಬೆಲೆ ಅಂಗಡಿಯ ಮಾಲೀಕ ಪ್ರತಿ ಕಾರ್ಡ್‌ನ ಯೂನಿಟ್‌ಗೆ 6 ಕೆ.ಜಿ. ಅಕ್ಕಿ ವಿತರಣೆ ಮಾಡಬೇಕೆಂಬ ನಿಯಮ ಇದ್ದರೂ 1 ಕೆ.ಜಿ ಅಕ್ಕಿಯನ್ನು ಕಡಿಮೆ ವಿತರಣೆ ಮಾಡುತ್ತಾರೆ. ಈ ಬಗ್ಗೆ ಗ್ರಾಹಕರು ಕೇಳಿದರೆ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಾರೆ. ತಿಂಗಳಲ್ಲಿ ಏಳೆಂಟು ದಿನ ಮಾತ್ರ ಪಡಿತರ ನೀಡುತ್ತಾರೆ. ನಂತರ ಹೋದ ಗ್ರಾಹಕರಿಗೆ ಅಕ್ಕಿ ಇಲ್ಲ ಎಂದು ವಾಪಸ್ ಕಳುಹಿಸುತ್ತಾರೆ. ಈ ನ್ಯಾಯಬೆಲೆ ಅಂಗಡಿ ಮಾಲೀಕ ಗ್ರಾಹಕರಿಗೆ ವಂಚಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ತಳ್ಳಾಟ, ನೂಕಾಟ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸುವ ಘಟನೆ ಕೂಡಾ ನಡೆಯಿತು.

ADVERTISEMENT

‘ಹಲವಾರು ತಿಂಗಳಿಂದ ಕೂಡಾ ನ್ಯಾಯಬೆಲೆ ಅಂಗಡಿಯ ಮಾಲೀಕ ತೂಕ ಕಡಿಮೆ ಮಾಡಿ ಅಕ್ಕಿ ವಿತರಣೆ ಮಾಡುತ್ತಿದ್ದಾರೆ. ಗ್ರಾಹಕರು ಕೇಳಲು ಹೋದರೆ ದಬಾಯಿಸಿ ಕಳುಹಿಸುತ್ತಾರೆ. ಗ್ರಾಹಕರಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಮರ್ಪಕವಾಗಿ ಪಡಿತರ ಪದಾರ್ಥಗಳನ್ನು ವಿತರಣೆ ಮಾಡುವಂತೆ ಮಾಡಬೇಕು’ ಎಂದು ಗ್ರಾಮಸ್ಥರಾದ ಮಲ್ಲಯ್ಯ, ವಿಜಯಕುಮಾರ್, ರಮೇಶ್ ಆಗ್ರಹಿಸಿದರು.

ಆಹಾರ ಇಲಾಖೆ ಶಿರಸ್ತೇದಾರ್ ಜಯರಾಂ ಮಾತನಾಡಿ, ‘ಈ ನ್ಯಾಯಬೆಲೆ ಅಂಗಡಿಯಲ್ಲಿ ತೂಕ ಕಡಿಮೆ ಕೊಡುತ್ತಿರುವ ಬಗ್ಗೆ ಈಗ ಗೊತ್ತಾಗಿದೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಗ್ರಾಹಕರಿಗೆ ಸಮರ್ಪಕವಾಗಿ ಪಡಿತರ ಪದಾರ್ಥಗಳು ವಿತರಣೆಯಾಗುವಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.