ADVERTISEMENT

‘ಕಾವಿ ತ್ಯಜಿಸಿ ರಾಜಕೀಯ ಸೇರಿ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 6:45 IST
Last Updated 8 ನವೆಂಬರ್ 2017, 6:45 IST

ದಾವಣಗೆರೆ: ವೀರಶೈವ ಸಮಾಜದ ವಿರುದ್ಧ ಅವಾಚ್ಯ ಶಬ್ದ ಬಳಸಿರುವ ಕೂಡಲ ಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬಹಿರಂಗವಾಗಿ ಕ್ಷಮೆಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಸಮಾಜದ ಮುಖಂಡ ಹಂಪಯ್ಯ ಸ್ವಾಮಿ ಎಚ್ಚರಿಕೆ ನೀಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಸವಣ್ಣ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಪ್ರಸ್ತುತ ಕೆಲವು ಮಠಾಧೀಶರು, ರಾಜಕೀಯ ಮುಖಂಡರು ಬಸವಣ್ಣನ ಹೆಸರಲ್ಲಿ ಪ್ರತ್ಯೇಕ ಜಾತಿ ಧರ್ಮ ಹುಟ್ಟುಹಾಕಲು ಹೊರಟಿರುವುದು ಖಂಡನೀಯ’ ಎಂದರು.

‘ಸ್ವಾರ್ಥಕ್ಕಾಗಿ ವೀರಶೈವ ಸಮಾಜವನ್ನು ಅವಹೇಳನ ಮಾಡಿರುವ ಕೂಡಲ ಸಂಗಮ ಸ್ವಾಮೀಜಿ ಕಾವಿ ಕಳಚಿ ರಾಜಕೀಯ ಸೇರಬೇಕು. ಇಲ್ಲವಾದರೆ, ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ’ ಹಂಪಯ್ಯ ಎಚ್ಚರಿಕೆ ನೀಡಿದರು.

ADVERTISEMENT

ಖಾವಿಗೆ ಪವಿತ್ರ ಸ್ಥಾನವಿದೆ. ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಇಡೀ ಸಮಾಜವೇ ಮುನ್ನಡೆಯುತ್ತದೆ. ಯೋಗ್ಯತೆ ಇಲ್ಲದವರು ಖಾವಿ ಧರಿಸಿದರೆ ಇಂತಹ ಅನಾಹುತಗಳು ನಡೆಯುತ್ತವೆ ಎಂದು ವಾಗ್ದಾಳಿ ನಡೆಸಿದರು.

ಮುಖಂಡ ಹಾಲಸ್ವಾಮಿ ಮಾತನಾಡಿ, ‘ಸಮಾಜವನ್ನು ಸರಿದಾರಿಗೆ ತರಬೇಕಾದವರೇ ಸಮಾಜವನ್ನು ಒಡೆಯಲು ಹೊರಟಿರುವುದು ಖಂಡನೀಯ. ರಾಜಕಾರಣಿಗಳಿಂದ ಹಣಪಡೆದು ಶ್ರೀಗಳು ದ್ರೋಹ ಎಸಗಿದ್ದಾರೆ’ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್‌.ಜಿ.ವಾಗೀಶ್ವರಯ್ಯ, ಕೆ.ಎಂ.ಪರಮೇಶ್ವರಯ್ಯ, ಡಿ.ಎಂ.ಹಾಲಸ್ವಾಮಿ, ಚಂದ್ರಶೇಖರಯ್ಯ, ಚನ್ನಬಸವಯ್ಯ, ಶಿವಯೊಗಿ ಹಿರೇಮಠ, ಕರಿಬಸವಯ್ಯ, ಶೇಖರಪ್ಪ, ಪ್ರಕಾಶ್‌, ಶಿವಾನಂದಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.