ನ್ಯಾಮತಿ: ‘ಇಂದೇ ಜಲತಜ್ಞರನ್ನು ಕರೆಸಿ. ರಾತ್ರಿಯೇ ಎರಡು ಕೊಳವೆಬಾವಿಗಳನ್ನು ಕೊರೆಸಬೇಕು. ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ರಮೇಶ್ ಅವರು ಎಂಜಿನಿಯರ್ ಮತ್ತು ಕಾರ್ಯದರ್ಶಿಗೆ ಸೋಮವಾರ ತಾಕೀತು ಮಾಡಿದರು.
ಎರಡು ತಿಂಗಳಿನಿಂದ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಕೂಡಲೇ ಗ್ರಾಮಕ್ಕೆ ಬಂದು ಸಮಸ್ಯೆ ನಿವಾರಿಸಬೇಕು ಎಂದು ಫಲವನಹಳ್ಳಿ ಗ್ರಾಮದ ಜನರು ದೂರವಾಣಿ ಮೂಲಕ ಕೋರಿದ್ದರಿಂದ ಉಮಾ ರಮೇಶ್ ಅವರು ಗ್ರಾಮಕ್ಕೆ ಬಂದು ಪರಿಶೀಲಿಸಿದರು. ‘ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೊರೆಸಿದ ಕೊಳವೆಬಾವಿಯಲ್ಲಿ ಉತ್ತಮ ನೀರು ಸಿಕ್ಕಿತ್ತು. ಆದರೆ, ಅದರ ಅಕ್ಕ–ಪಕ್ಕದ ಜಮೀನಿನಲ್ಲಿ ರೈತರೂ ಕೊಳವೆಬಾವಿ ಕೊರೆಸಿದ್ದರಿಂದ ನೀರಿನ ಹರಿವು ಕಡಿಮೆಯಾಗಿದೆ’ ಎಂದು ಗ್ರಾಮಸ್ಥರು ಗಮನಕ್ಕೆ ತಂದರು.
ಇದರಿಂದ ಸಿಟ್ಟಿಗೆದ್ದ ಅಧ್ಯಕ್ಷೆ, ‘ಕುಡಿಯುವ ನೀರಿನ ಕೊಳವೆಬಾವಿಯ ಸಮೀಪ ಖಾಸಗಿಯವರು ಕೊಳವೆಬಾವಿ ಕೊರೆಸಬಾರದು ಎಂಬ ವಿಷಯ ನಿಮಗೆ ತಿಳಿದಿಲ್ಲವೇ? ಏಕೆ ಕೊಳವೆಬಾವಿ ಕೊರೆಸಲು ಅವಕಾಶ ಮಾಡಿಕೊಟ್ಟಿದ್ದೀರಿ? ಎಂದು ಎಂಜಿನಿಯರ್ ವೀರಭದ್ರಪ್ಪ ಮತ್ತು ಕಾರ್ಯದರ್ಶಿ ಸೋಮಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
‘ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.
ಮುಖಂಡರಾದ ಸಿದ್ಧಪ್ಪಗೌಡ, ಗೋವಿಂದರಾಜು, ಶ್ರೀನಿವಾಸ ನರಸಪ್ಪ, ಎಸ್.ಟಿ. ನಾಗರಾಜಪ್ಪ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.