ಹೊನ್ನಾಳಿ: ತಾಲ್ಲೂಕಿನ ದೊಡ್ಡೆರೆಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಕೂಡಲೇ ತಡೆಯಬೇಕು ಎಂದು ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸೋಮವಾರ ತಹಶೀಲ್ದಾರ್ ಅವರಿಗೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರನ್ನು ಬೆಂಬಲಿಸಿ ಕರವೇ ಅಧ್ಯಕ್ಷ ವಿನಯ್ ಪತ್ರಿಕೆಯೊಂದಿಗೆ ಮಾತನಾಡಿದರು.
ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವ ನಾಗರಾಜ್ ಅವರ ಮನೆಯಲ್ಲಿ ಮಾಲು ಸಹಿತ ಹಿಡಿದು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಪೊಲೀಸರು ಬರುವಷ್ಟರಲ್ಲಿ ನಾಗರಾಜ್ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿದರು. ನಾಗರಾಜ್ ಅವರನ್ನು ಠಾಣೆಗೆ ಕಳಿಸಿಕೊಡುವಂತೆ ಅವರ ಪತ್ನಿ ಕುಸುಮಾ ಅವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ ಗ್ರಾಮದ ಮಹಿಳೆ ಬಿ.ಎಂ.ರಾಧಮ್ಮ ಅವರು ಮಾತನಾಡಿ, ಗ್ರಾಮದಲ್ಲಿ ಕುಡುಕರ ಕಾಟದಿಂದ ನೆಮ್ಮದಿ ಇಲ್ಲದಂತಾಗಿದೆ. ಅನೇಕ ಸಂಸಾರಗಳು ಹಾಳಾಗಿವೆ. ಮಕ್ಕಳು ಕೂಡಾ ಕುಡಿತದ ಚಟಕ್ಕೆ ಬೀಳುತ್ತಿದ್ದಾರೆ. ಆದ್ದರಿಂದ ನಾವೆಲ್ಲ ಮಹಿಳೆಯರು ಮದ್ಯಪಾನ ಮುಕ್ತ ಗ್ರಾಮವನ್ನಾಗಿ ಮಾಡಲು ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕರವೇ ಘಟಕದ ಮಹಿಳಾ ಅಧ್ಯಕ್ಷೆ ಶೃತಿ ಶಂಕರ್, ಉಪಾಧ್ಯಕ್ಷೆ ದೊಡ್ಡೆರೆಹಳ್ಳಿ ಉಮಾ, ಕೊನಾಯಕನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ದಯಾನಂದ್, ಪದಾಧಿಕಾರಿಗಳಾದ ಚಂದ್ರಪ್ಪ, ಪ್ರಸನ್ನ, ಮತ್ತು ಗ್ರಾಮದ ಮಹಿಳೆ ರಾಧಮ್ಮ ಸೇರಿದಂತೆ ಅನೇಕ ಮಹಿಳೆಯರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.