ಹಿರಿಯೂರು: ‘ದಕ್ಷಿಣ ಕಾಶಿ’ ಎಂದು ಖ್ಯಾತಿ ಪಡೆದಿರುವ ನಗರದ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಂಭ್ರಮದ ನಡುವೆ ನೆರವೇರಿತು.
ಬೀರೇನಹಳ್ಳಿಯ ಮಜುರೆ ಕರಿಯ ಣ್ಣನಹಟ್ಟಿ ಗ್ರಾಮದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಬೆಳಿಗ್ಗೆ 11ಕ್ಕೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ದೇವಸ್ಥಾನ ನಿರ್ಮಾಣಕ್ಕೆ ಕಾರಣಳಾದ ಹೇಮರೆಡ್ಡಿ ಮಲ್ಲಮ್ಮ ಊರು ಗೋಲಾಗಿ ಬಳಸುತ್ತಿದ್ದಳು ಎನ್ನಲಾದ ಶಿವಧನುಸ್ಸನ್ನು ಸಮೀಪದ ವೇದಾವತಿ ನದಿಗೆ ಒಯ್ದು ಗಂಗಾಸ್ನಾನ ನೆರವೇರಿಸಲಾಯಿತು. ಬಳಿಕ ಮರಳಿ ದೇಗುಲಕ್ಕೆ ತರಲಾಯಿತು.
ಶಾಸಕ ಡಿ.ಸುಧಾಕರ್ ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ಪೂಜೆಯ ನಂತರ ಚರ್ಮ ವಾದ್ಯದ ನಡುವೆ ಅಲಂಕರಿಸಿದ ರಥಕ್ಕೆ ದೇವರನ್ನು ಕರೆತಂದು ಕೂರಿಸಿದ ನಂತರ ರಥೋತ್ಸವಕ್ಕೆ ಚಾಲನೆ ಸಿಕ್ಕಿತು.
ದೇವಸ್ಥಾನದ ಮುಂಭಾಗದಿಂದ ಸಿದ್ಧನಾಯಕ ವೃತ್ತದವರೆಗೆ ಅಪಾರ ಜನಸ್ತೋಮದ ಉದ್ಗೋಷದ ನಡುವೆ ರಥ ಸಾಗಿತು. ಸಿದ್ಧನಾಯಕ ವೃತ್ತದಲ್ಲಿ ಸಾವಿರಾರು ಭಕ್ತರು ದೇವರಿಗೆ ಹರಕೆ ಸಲ್ಲಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ ಹಾಗೂ ಉಮಾ ಮಹೇಶ್ವರಸ್ವಾಮಿ ರಥೋತ್ಸವ ಒಟ್ಟಿಗೇ ನಡೆಯುವುದು ವಿಶೇಷ ಎನ್ನುತ್ತಾರೆ ಹಿರಿಯರು.
ರಥೋತ್ಸವದಲ್ಲಿ ಶಾಸಕ ಡಿ.ಸುಧಾಕರ್, ಜಾತ್ರಾ ಸಮಿತಿ ಅಧ್ಯಕ್ಷ ಆರ್.ನಾಗೇಂದ್ರನಾಯ್ಕ, ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಮತ್ತಿತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.