ಬಸವಾಪಟ್ಟಣ: ಕೃಷಿ ಇಲಾಖೆ ಪರಿಚಯಿಸಿರುವ ಕೂರಿಗೆ ಮೂಲಕ ಭತ್ತ ಬಿತ್ತನೆಯ ಕ್ರಮ ಅನುಸರಿಸಿದರೆ ಅಧಿಕ ಲಾಭ ಗಳಿಸಬಹುದು ಎಂದು ರೈತ ಮುಖಂಡ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್ ಸಲಹೆ ನೀಡಿದರು. ಅವರು ಕಾರಿಗನೂರಿನ ಸುಂದರೇಶ್ ಪಟೇಲ್ ಅವರ ಭತ್ತದ ಗದ್ದೆಯಲ್ಲಿ ಏರ್ಪಡಿಸಿದ್ದ ಭತ್ತದ ಬೆಳೆ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಈ ಬಿತ್ತನೆಯಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರೊಂದಿಗೆ, ಮಣ್ಣಿನ ಫಲವತ್ತತೆಯ ರಕ್ಷಣೆಯಾಗುತ್ತದೆ.ಉತ್ತಮ ಇಳುವರಿಯೂ ದೊರೆಯುತ್ತದೆ ಎಂದು ಹೇಳಿದರು.
ದಾವಣಗೆರೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ ಮಾತನಾಡಿ, ‘ರೈತರು ಕೃಷಿ ಇಲಾಖೆಯು ಒದಗಿಸಿರುವ ವಿವಿಧ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಜತೆಗೆ ಸಾವಯುವ ಗೊಬ್ಬರಗಳನ್ನು ಹೆಚ್ಚಾಗಿ ಬಳಸಬೇಕು. ಈ ಬಗ್ಗೆ ಕೃಷಿ ವಿಜ್ಞಾನಿಗಳ ಸಲಹೆಯನ್ನು ಪಡೆಯಬೇಕು’ ಎಂದರು.
ಕೃಷಿ ಇಲಾಖೆಯ ಉಪ ನಿರ್ದೇಶಕಿ ಹಂಸವೇಣಿ ಮಾತನಾಡಿ, ‘ಕೂರಿಗೆ ಬಿತ್ತನೆಯಿಂದ ನಾಟಿ ಪದ್ಧತಿಯಲ್ಲಿ ಬಳಕೆಯಾಗುವ ಅರ್ಧದಷ್ಟು ಮಾತ್ರ ನೀರು ಸಾಕಾಗುತ್ತದೆ. ಇಳುವರಿಯೂ ಹೆಚ್ಚಾಗಿದ್ದು, ರೋಗಬಾಧೆ ತುಂಬಾ ಕಡಿಮೆ’ ಎಂದು ಮಾಹಿತಿ ನೀಡಿದರು.
ಕತ್ತಲಗೆರೆಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಸಿ.ಮಲ್ಲೇಶಪ್ಪ, ಎಸ್.ಬಿ.ರಾಜಶೇಖರಪ್ಪ, ಕೆ.ಬಸವರಾಜಪ್ಪ ಮಾತನಾಡಿದರು. ಕಾರಿಗನೂರು, ಕತ್ತಲಗೆರೆ, ಅರೆಹಳ್ಳಿ ಮತ್ತು ತ್ಯಾವಣಿಗೆಯ ನೂರಾರು ರೈತರು ಭಾಗವಹಿಸಿದ್ದರು. ತ್ಯಾವಣಿಗೆ ರೈತ ಸಂಪರ್ಕ ಕೇಂಣದ್ರ ಕೃಷಿ ಅಧಿಕಾರಿ ಶ್ರೀನಿವಾಸುಲು ಸ್ವಾಗತಿಸಿದರು. ಬಸವೇಶ್ ಪಾಟೀಲ್ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.