ADVERTISEMENT

ಮುಖ್ಯಮಂತ್ರಿ ಆಗಮನ ಹಿನ್ನೆಲೆ: ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 7:01 IST
Last Updated 18 ನವೆಂಬರ್ 2017, 7:01 IST

ಚನ್ನಗಿರಿ: ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ 12ಕ್ಕೆ ನಡೆಯಲಿರುವ ₹ 446 ಕೋಟಿ ವೆಚ್ಚದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆಗಮಿಸಲಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶುಕ್ರವಾರದಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಿದೆ.

ಮುಖ್ಯಮಂತ್ರಿಯವರು ಪಟ್ಟಣದ ಬಾಪೂಜಿ ಹೆಲಿಪ್ಯಾಡಿಗೆ 11.40ಕ್ಕೆ ಹೆಲಿಕಾಪ್ಟರ್‌ನಲ್ಲಿ ಬರಲಿದ್ದು, ಇದರ ಅಂಗವಾಗಿ 8 ಡಿವೈಎಸ್‌ಪಿ, 14 ಸಿಪಿಐ, 28 ಪಿಎಸ್‌ಐ, 45 ಎಎಸ್‌ಐ, 449 ಹೆಚ್‌ಸಿ, ಪಿಸಿ, 24 ಮಹಿಳಾ ಪೊಲೀಸ್ ಸೇರಿ ಒಟ್ಟು 568 ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜತೆಗೆ 4 ಕೆಎಸ್‌ಆರ್‌ಪಿ, 4 ಡಿಆರ್, 3 ಕ್ಯೂಆರ್‌ಟಿ ಹಾಗೂ 3 ಎಎಸ್‌ಸಿ ವಾಹನಗಳು ಬಂದೋಬಸ್ತ್‌ನಲ್ಲಿ ಇರುತ್ತವೆ ಎಂದು ಗ್ರಾಮಾಂತರ ವಿಭಾಗದ ಡಿವೈಎಸ್‌ಪಿ ಮಂಜುನಾಥ್ ಕೆ.ಗಂಗಲ್ ತಿಳಿಸಿದರು.

ಈಗಾಗಲೇ ವಾಹನಗಳ ನಿಲುಗಡೆಗಾಗಿ ಪಟ್ಟಣದ ಜೀವವಿಮಾ ಕಚೇರಿ ಹಿಂಭಾಗ, ಹಳೆ ಹೆಲಿಪ್ಯಾಡ್ ಆವರಣ, ಎಪಿಎಂಸಿ ಪ್ರಾಂಗಣ, ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು, ನಮಗೆ ನಿಯೋಜಿಸಿದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.