ಹರಿಹರ: ನಗರದ ಭಾರತ್ ಆಯಿಲ್ ಮಿಲ್ ಕಾಂಪೌಂಡ್ನಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿದ ಕಾವೇರಿ ವಸತಿ ಸಮುಚ್ಚಯ ಉದ್ಘಾಟನೆಗೆ ಪೂರ್ವಸಿದ್ಧತೆ ಕೈಗೊಳ್ಳದಿರುವುದು ಹಾಗೂ ಫಲಾನುಭವಿಗಳಿಗೆ ಮಾಹಿತಿ ನೀಡದೇ ಇರುವುದರಿಂದ ಕಾರ್ಯಕ್ರಮ ವನ್ನು ಮಾರ್ಚ್ 18ಕ್ಕೆ ಮುಂದೂಡಿದ ಘಟನೆ ಭಾನುವಾರ ನಡೆಯಿತು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ಭಾರತ್ ಆಯಿಲ್ಮಿಲ್ ಕಾಂಪೌಂಡ್ ನಲ್ಲಿ ಜಿ+2 ಮಾದರಿಯ ಕಾವೇರಿ ವಸತಿ ಸಮುಚ್ಚಯ ನಿರ್ಮಾಣಗೊಂಡಿತ್ತು. ಸಮುಚ್ಚಯದಲ್ಲಿ 60 ಮನೆಗಳಿದ್ದು, ಭಾನುವಾರ ಬೆಳಿಗ್ಗೆ 10ಕ್ಕೆ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.
ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ‘ಕಾರ್ಯಕ್ರಮದ ಆಯೋ ಜಕರು ಪೂರ್ವಸಿದ್ಧತೆಯಲ್ಲಿ ವಿಫಲರಾಗಿ ದ್ದಾರೆ. ಕಾರ್ಯಕ್ರಮಕ್ಕೆ ವೇದಿಕೆ
ಹಾಗೂ ಆಹ್ವಾನಿತರಿಗೆ ಆಸನದ ವ್ಯವಸ್ಥೆ ಮಾಡಿಲ್ಲ. ಉದ್ಘಾಟನಾ ಶಿಲಾಫಲಕವನ್ನೂ ಹೊಂದಿಸಿಲ್ಲ. ಫಲಾನುಭವಿಗಳನ್ನು ಆಹ್ವಾನಿಸಿಲ್ಲ’ ಎಂದು ಮಂಡಳಿಯ ಸಹಾಯಕ ಎಂಜಿನಿಯರ್ ಎಸ್.ಎಲ್. ಆನಂದಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಹಕ್ಕುಪತ್ರ ಪಡೆಯದೇ ಅನೇಕ ಫಲಾನುಭವಿಗಳು ಸಮುಚ್ಚಯದ ಮನೆಗಳಲ್ಲಿ ವಾಸಿಸುತ್ತಿರುವ ಬಗ್ಗೆ ಶಾಸಕರು ಅಧಿಕಾರಿಯನ್ನು ಪ್ರಶ್ನಿಸಿದರು. ‘ಫಲಾನುಭವಿಗಳು ತಗಡಿನ ಶೆಡ್ಗಳಲ್ಲಿ ವಾಸಿಸುತ್ತಿದ್ದರು. ಸೊಳ್ಳೆ, ಹೆಗ್ಗಣ ಹಾಗೂ ಹಂದಿಗಳ ಕಾಟ ಹೆಚ್ಚಾಗಿದ್ದರಿಂದ ಮನೆಯಲ್ಲಿ ವಾಸಿಸಲು ಅವಕಾಶ ನೀಡ ಲಾಗಿತ್ತು’ ಎಂದು ಅಧಿಕಾರಿ ಹೇಳಿದರು.
‘ಸಮುಚ್ಚಯಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ₹ 25 ಲಕ್ಷ ಮಂಜೂರಾಗಿದೆ. ಅಗತ್ಯ ಸಿದ್ಧತೆಗಳೊಂದಿಗೆ ಮಾರ್ಚ್್ 18ರಂದು ಕಾವೇರಿ ಸಮುಚ್ಚಯ ಉದ್ಘಾಟನೆ, ರಸ್ತೆ ಕಾಮಗಾರಿ ಚಾಲನೆಗೆ ವ್ಯವಸ್ಥೆ ಮಾಡಿ’ ಎಂದು ಶಾಸಕರು ಸೂಚಿಸಿದರು.
‘ನಗರದ ಜೈಭೀಮನಗರದಲ್ಲಿ 401 ಹಾಗೂ ಬೆಂಕಿನಗರದಲ್ಲಿ 400 ಮನೆಗಳು ಸೇರಿ ಜಿ+2 ಮಾದರಿಯ ಒಟ್ಟು 801 ಮನೆಗಳ ನಿರ್ಮಾಣದ ನೀಲನಕ್ಷೆಯನ್ನು ಕೊಳೆಗೇರಿ ಮಂಡಳಿ ಸಿದ್ಧಪಡಿಸಿದೆ. ಶೀಘ್ರವೇ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ’ ಎಂದು ಅವರು ಮಾಹಿತಿ ನೀಡಿದರು.
ನಗರಸಭೆ ಸದಸ್ಯ ಹಬೀಬ್ ಉಲ್ಲಾ, ಮುಖಂಡರಾದ ರಮೇಶ, ಕಂಚಿಕೇರಿ ಗಣೇಶಪ್ಪ, ಸ್ಲಂ ಬೋಡರ್್ ಎಂಜಿನಿಯರ್ ಎಸ್.ಟಿ. ಪಾಟೀಲ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.