ದಾವಣಗೆರೆ: ಜಿಲ್ಲೆಯನ್ನು ಬಯಲು ಶೌಚಮುಕ್ತಗೊಳಿಸುವ ನಿಟ್ಟಿನಲ್ಲಿ ಗುದ್ದಲಿ ಹಿಡಿದು ಶೌಚಾಲಯ ಗುಂಡಿ ತೋಡಿದ್ದ ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಅಶ್ವತಿ ಶುಕ್ರವಾರ ತಾಲ್ಲೂಕಿನ ಹಳೇಬಾತಿಯಲ್ಲಿ ಪೂರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆಯ ಸಾಧನೆಗಳನ್ನು ಜನರಿಗೆ ತಿಳಿಸುವ ‘ಸ್ವಚ್ಛ ಹೇ ಸೇವಾ’ (ಸ್ವಚ್ಛತೆ ಎಂಬುದು ಸೇವೆ) ಅಭಿಯಾನದ ಅಂಗವಾಗಿ ಸಿಇಒ ಗ್ರಾಮದ ಶಾಲಾ ಆವರಣ, ಚರಂಡಿ, ರಸ್ತೆಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು.
‘ಬೆಳಿಗ್ಗೆ 8.30ಕ್ಕೆ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ರಮ ಮಧ್ಯಾಹ್ನ 12ಗಂಟೆಯವರೆಗೆ ನಡೆಯಿತು. ಸಿಇಒ ಸ್ವತಃ ಪೂರಕೆ ಹಿಡಿದು ಗುಡಿಸಿದರು. ನಂತರ ಬಾಣಲಿಯಲ್ಲಿ ಕಸ ತುಂಬಿಕೊಂಡು ಅವರೇ ಟ್ರ್ಯಾಕ್ಟರ್ಗೆ ಹಾಕಿದರು’ ಎಂದು ಜಿಲ್ಲಾ ಪಂಚಾಯ್ತಿ ಉಪ ಯೋಜನಾಧಿಕಾರಿ ಕೆ.ಜಿ.ಶಶಿಧರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಿಇಒ ಅವರೊಂದಿಗೆ ಉಪ ಕಾರ್ಯದರ್ಶಿ ಜಿ.ಎಸ್.ಷಡಕ್ಷರಪ್ಪ, ದಾವಣಗೆರೆ ಇಒ ಪ್ರಭುದೇವ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.