ADVERTISEMENT

‘ಕಾಂಗ್ರೆಸ್‌ ಮುಕ್ತ ಭಾರತ: ಬಿಜೆಪಿಯದ್ದು ಹಗಲುಗನಸು’

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 11:10 IST
Last Updated 28 ಜೂನ್ 2016, 11:10 IST

ದಾವಣಗೆರೆ:ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕಾದರೆ ಎಡಪಕ್ಷಗಳು, ಪ್ರಾದೇಶಿಕ ಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳು ಇರಬೇಕಾಗುತ್ತದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದಲ್ಲಿ ನಂಬಿಕೆಯೇ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಅವರು ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಹಗಲುಗನಸು ಕಾಣುತ್ತಿದ್ದಾರೆ ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಡಿ.ಬಸವರಾಜ್ ವ್ಯಂಗ್ಯವಾಡಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಿಜೆಪಿಗೆ ಈಗ ಕಾಂಗ್ರೆಸ್ ಮುಕ್ತ ಎಂಬ ರೋಗ ಬಂದಿದ್ದು, ಅದನ್ನು ಶಮನ ಮಾಡಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಪ್ರಧಾನಿ ಮೋದಿ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣುತ್ತಿದ್ದರೆ, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಕಾಂಗ್ರೆಸ್ ಮುಕ್ತ ಕರ್ನಾಟಕದ ಬಗ್ಗೆ ಮಾತನಾಡುತ್ತಿದ್ದಾರೆ. ಕೇಂದ್ರ ಸಚಿವ ಸಿದ್ದೇಶ್ವರ್ ಸಹ ಕಾಂಗ್ರೆಸ್ ಮುಕ್ತ ದಾವಣಗೆರೆ ನಿರ್ಮಾಣದ ಬಗ್ಗೆ ಮಾತ ನಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಣ್ಣದ ಮಾತುಗಳನ್ನು ಆಡಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ಮೋದಿ ನೇತೃತ್ವದ ಬಿಜೆಪಿ ಚುನಾವಣೆ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ.

ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುತ್ತಾರೆಂದು ಜನತೆ ಪ್ರಧಾನಿಯತ್ತ ನೋಡುತ್ತಿರುವ ಸಂದರ್ಭದಲ್ಲೇ ಜನರ ದಾರಿ ತಪ್ಪಿಸಲು ಬಿಜೆಪಿ ಮುಖಂಡರು ಕಾಂಗ್ರೆಸ್ ಮುಕ್ತ ಭಾರತದ ಮಂತ್ರ ಜಪಿಸುತ್ತಿದ್ದಾರೆ ಎಂದು ಅವರು  ಆರೋಪಿಸಿದರು.

ಅಂಬೇಡ್ಕರ್ ಅವರನ್ನು ಜೀವಿತಾವಧಿಯಲ್ಲಿ ಅಮಾನವೀಯ ವಾಗಿ ನಡೆಸಿಕೊಂಡ ಸಂಘ ಪರಿವಾರ, ಬಿಜೆಪಿಯವರು ಈಗ ದಲಿತರ ಮತ ಬ್ಯಾಂಕ್‌ಗಾಗಿ ಅಂಬೇಡ್ಕರ್ ಕುರಿತು ಉದ್ದುದ್ದ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಅಲ್ಲಾವಲ್ಲಿ ಗಾಜಿಖಾನ್, ಜಿಲ್ಲಾ ವಕ್ಛ್ ಬೋರ್ಡ್ ನಿರ್ದೇಶಕ ಅಣಬೇರು, ಜಾಫರ್ ಶರೀಫ್, ಡಿ. ಶಿವಕುಮರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.