ADVERTISEMENT

ಭತ್ತ ಬೆಳೆಯಲು ಹೆದರದಿರಿ: ಸ್ಥೈರ್ಯ ತುಂಬಿದ ರವೀಂದ್ರನಾಥ್‌

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 17:25 IST
Last Updated 31 ಜುಲೈ 2018, 17:25 IST
ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೇ ಭಾಗದ ಗ್ರಾಮಗಳಲ್ಲಿ ನಾಲೆಗಳಲ್ಲಿ ಹೂಳು ತುಂಬಿರುವುದನ್ನುಶಾಸಕ ಎಸ್‌.ಎ. ರವೀಂದ್ರನಾಥ್‌ ವೀಕ್ಷಿಸಿದರು
ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೇ ಭಾಗದ ಗ್ರಾಮಗಳಲ್ಲಿ ನಾಲೆಗಳಲ್ಲಿ ಹೂಳು ತುಂಬಿರುವುದನ್ನುಶಾಸಕ ಎಸ್‌.ಎ. ರವೀಂದ್ರನಾಥ್‌ ವೀಕ್ಷಿಸಿದರು   

ದಾವಣಗೆರೆ: ‘ನಾಲೆಯ ಹೂಳೆತ್ತಿಸುವ ಮೂಲಕ ಈ ಬಾರಿ ಕೊನೇ ಭಾಗಕ್ಕೂ ನೀರು ಹರಿಸಲಾಗುವುದು. ಧೈರ್ಯಗೆಡದೆ ಭತ್ತ ಬೆಳೆಯಿರಿ. ನಿಮ್ಮ ಜತೆ ನಾನಿದ್ದೇನೆ’ ಎಂದು ಭ್ರಾ ಅಚ್ಚುಕಟ್ಟಿನ ಕೊನೇ ಭಾಗದ ರೈತರಿಗೆ ಶಾಸಕ ಎಸ್‌.ಎ. ರವೀಂದ್ರನಾಥ್‌ ಸ್ಥೈರ್ಯ ತುಂಬಿದರು.

ತಾಲ್ಲೂಕಿನ ಕಡ್ಲೇಬಾಳ್‌, ಅರಸಾಪುರ, ಮಾಗನಹಳ್ಳಿ, ಆವರಗೆರೆ, ಕಕ್ಕರಗೊಳ್ಳ, ಕೊಂಡಜ್ಜಿ ಹಳ್ಳಿಗಳಿಗೆ ಸೋಮವಾರ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಅವರು ಮಾತನಾಡಿದರು.

ನಾಲಾ ಭಾಗದಲ್ಲಿ ಹೋಳೆತ್ತದಿರುವುದರಿಂದ ಕೊನೇಭಾಗದ 30 ಸಾವಿರ ಎಕರೆ ಪ್ರದೇಶಕ್ಕೆ ನೀರು ತಲುಪಿಲ್ಲ. ನೀರಾವರಿ ಸಚಿವರಲ್ಲಿ ಒತ್ತಡ ತಂದ ಬಳಿಕ ₹ 16.5 ಲಕ್ಷ ಅಂದಾಜು ವೆಚ್ಚದ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಅದೂ ಸಾಹಸದ ಕೆಲಸ. ಅಧಿಕಾರಿಗಳು ತ್ವರಿತವಾಗಿ ಕೆಲಸ ಮುಗಿಸಿ ರೈತರಿಗೆ ನೀರು ಕೊಡಬೇಕು ಎಂದು ಸೂಚಿಸಿದರು.

ADVERTISEMENT

ನೀರು ತಲುಪದಿರಲು ನೀರಾವರಿ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವುದೇ ಕಾರಣ ಎಂದು ರೈತರು ದೂರಿದರು.

ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿಲ್ಲ. ಮಳೆಯಾಗಿದ್ದರಿಂದ ನಾಲೆಗಳಲ್ಲಿ ಹೂಳು ತುಂಬಿದೆ. 2 ದಿನಗಳಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಹೂಳೆತ್ತುವ ಕಾಮಗಾರಿ ಪ್ರಾರಂಭವಾಗಲಿದೆ. 15 ದಿನಗಳಲ್ಲಿ ನೀರು ಒದಗಿಸಲಾಗುವುದು ಎಂದು ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ವಿಕಾಸ್‌ ಸ್ಪಷ್ಟನೆ ನೀಡಿದರು.

ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಶೀಘ್ರದಲ್ಲಿ ನೀರು ಕಲ್ಪಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.

ಮುಖಂಡರಾದ ಬಿ.ಎಸ್‌. ಜಗದೀಶ್‌, ಧನಂಜಯ್‌ ಕಡ್ಲೇಬಾಳ್‌, ಬಸವರಾಜ್‌, ನಾಗರಾಜ್‌, ಶ್ರೀನಿವಾಸ್‌, ದುರ್ಗೇಶ್‌ ಪೂಜಾರಿ, ಓಂಕಾರಪ್ಪ, ಮಾಗನಹಳ್ಳಿ ಕೆಂಚಪ್ಪ, ಹಾಲೇಶಪ್ಪ, ಸಿದ್ದೇಶಮ ಶಿವರಾಜ ಪಾಟೀಲ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.