ದಾವಣಗೆರೆ: ಕಳೆದ ವರ್ಷ ತಮಿಳುನಾಡಿನ ಸಿ. ರಾಜಕುಮಾರ್ ಅವರಿಗೆ ನಕಲಿ ಬಂಗಾರ ಕೊಟ್ಟು ₹ 12.50 ಲಕ್ಷ ಪಡೆದು ವಂಚಿಸಿದ್ದ ಚನ್ನಗಿರಿ ತಾಲ್ಲೂಕಿನ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಚಿಕ್ಕಕುರುಬರ ಹಳ್ಳಿಯ ವೆಂಕಟೇಶ್ (46) ಹಾಗೂ ಚಿಕ್ಕಬೆನ್ನೂರು ಗ್ರಾಮದ ಮಂಜಪ್ಪ (46) ಬಂಧಿತರು.
ಪ್ರಕರಣದ ವಿವರ:
ತಮಿಳುನಾಡಿನ ಕಡಲೂರು ಜಿಲ್ಲೆಯ ರಾಜಕುಮಾರ್ ಅವರಿಗೆ 2017ರ ಜುಲೈ ಹಾಗೂ ಆಗಸ್ಟ್ನಲ್ಲಿ ದೂರವಾಣಿ ಕರೆ ಮಾಡಿದ ಆರೋಪಿಗಳು ತಮಗೆ ನಿಧಿ ಸಿಕ್ಕಿದೆ ಎಂದು ನಂಬಿಸಿದ್ದರು. ಅಕ್ಟೋಬರ್ನಲ್ಲಿ ಶಿವಮೊಗ್ಗ ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮದ ಬಳಿ ರಾಜಕುಮಾರ್ ಅವರನ್ನು ಕರೆಸಿಕೊಂಡ ಆರೋಪಿಗಳು ಬಳಿಕ ಕಾರಿನಲ್ಲಿ ಅವರನ್ನು ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮದ ಕರೆದುಕೊಂಡು ಬಂದಿದ್ದರು. ಅಲ್ಲಿ ನಕಲಿ ಬಂಗಾರವನ್ನು ಕೊಟ್ಟು, ಹಣ ಪಡೆದು ಪರಾರಿಯಾಗಿದ್ದರು. ಈ ಬಗ್ಗೆ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ ಟಿ.ಜೆ. ಅವರು ಡಿವೈಎಸ್ಪಿ ಎಂ.ಕೆ. ಗಂಗಲ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಹೊನ್ನಾಳಿ ಸಿಪಿಐ ಜೆ. ರಮೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳು ವಂಚಿಸಿದ್ದ ₹ 10.18 ಲಕ್ಷ ನಗದು ವಶಪಡಿಸಿಕೊಂಡಿದೆ.
ತಂಡದಲ್ಲಿ ನ್ಯಾಮತಿ ಠಾಣೆಯ ಪಿ.ಎಸ್.ಐ ಹನುಮಂತಪ್ಪ ಎಂ. ಶಿರೀಹಳ್ಳಿ, ಎ.ಎಸ್.ಐ ಜಿ. ಮೋಹನ್, ಸಿಬ್ಬಂದಿಯಾದ ರವಿನಾಯಕ, ತಾಂತ್ರಿಕ ವಿಭಾಗದ ಸಿಬ್ಬಂದಿ ರಾಮಚಂದ್ರ ಜಾಧವ, ಲೋಕಪ್ಪ, ರಾಘವೇಂದ್ರ, ಮಜೀದ್, ರಮೇಶನಾಯ್ಕ, ವೆಂಕಟರಮಣ, ಅರುಣ, ಎನ್.ಎಂ. ಹನುಮಂತಪ್ಪ, ಎಸ್. ರಂಗನಾಥ, ವಿ.ಜಿ. ಗಂಗಪ್ಪ, ಶಾಂತರಾಜ ಕಾರ್ಯನಿರ್ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.