ಧಾರವಾಡ: ‘ಮಳೆ ಅಭಾವದಿಂದ ಕಂಗೆಟ್ಟಿರುವ ರೈತರಿಗೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಜೇನು ಕೃಷಿ ನೆರವಾಗಲಿದೆ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು.
ಜಿಲ್ಲಾ ಪಂಚಾಯ್ತಿ ಹಾಗೂ ತೋಟಗಾರಿಕೆ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ವೈಜ್ಞಾನಿಕ ಜೇನು ಕೃಷಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಕರು ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡು ಸ್ವಯಂ ಉದ್ಯೋಗ ಕಂಡುಕೊಳ್ಳಬೇಕು. ಜೇನು ಕೃಷಿಯು ಉತ್ತಮ ಆದಾಯ ತರುವ ಹಾಗೂ ಪ್ರಕೃತಿ ಸ್ನೇಹಿ ಕಾಯಕವಾಗಿದೆ. ಇದರ ನಿರ್ವಹಣೆಯೂ ಅಗ್ಗ. ಅಲ್ಪ ಜಾಗದಲ್ಲಿ ಜೇನು ಕೃಷಿ ಕೈಗೊಳ್ಳಬಹುದಾದ್ದರಿಂದ ರೈತ ಮಹಿಳೆಯರು ಹಾಗೂ ಗೃಹಿಣಿಯರು ತಮ್ಮ ಮನೆಯ ಆವರಣ, ಹಿತ್ತಲಿನಲ್ಲಿ ಜೇನು ಕೃಷಿಯನ್ನು ಕೈಗೊಳ್ಳಬಹುದು’ ಎಂದರು.
‘ಪ್ರತಿ ತಾಲ್ಲೂಕಿನಲ್ಲೂ ಜೇನು ಕೃಷಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ತೋಟಗಾರಿಕೆ ಇಲಾಖೆಯಿಂದ ಜೇನು ಕೃಷಿ ಮಾಡಲು ಅಗತ್ಯವಿರುವ ಪರಿಕರಗಳ ಖರೀದಿಗೆ ಸಹಾಯಧನ ನೀಡಲಾಗುವುದು’ ಎಂದರು.
ಉಳುವಾಯೋಗಿ ರೈತ ಉತ್ಪಾದಕ ಸಂಘದ ಅಧ್ಯಕ್ಷ ದ್ಯಾಮಣ್ಣ ರೇವಣ್ಣನವರ ಮಾತನಾಡಿ, ‘ಹಿಂದೆ ಒಂದು ಹನಿ ಜೇನು, ಒಂದು ಹನಿ ರಕ್ತಕ್ಕೆ ಸಮ ಎಂಬ ಕಲ್ಪನೆ ಇತ್ತು. ಜೇನಿಗೆ ರೋಗ ಗುಣಪಡಿಸುವ ಸಾಮರ್ಥ್ಯ ಇದೆ. ಜೇನು ಕೃಷಿಯ ಮೂಲಕ ಪ್ರತಿಯೊಬ್ಬರ ಆರೋಗ್ಯಕ್ಕೆ ಕಾರಣರಾಗಬೇಕು’ ಎಂದರು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ. ಕೆ. ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಕುಂಟಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಪೂಜಾ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಐ.ಕುಂದಗೋಳ, ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷ ಈಶ್ವರ ಕಿತ್ತೂರು, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಸಹ ಪ್ರಾಧ್ಯಾಪಕಿ ಡಾ. ಸುವರ್ಣಾ ಪಾಟೀಲ, ಹಿರಿಯ ವಿಜ್ಞಾನಿ ನರೇಂದ್ರ ಕುಲಕರ್ಣಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.