ಧಾರವಾಡ: 'ಹಿಂದಿನ ಕಾಲದಲ್ಲಿ ಸ್ತ್ರೀಯರು ಶಿಕ್ಷಣ ಇರದಿದ್ದರೂ ತಮ್ಮ ಜ್ಞಾನ ಮತ್ತು ಅನುಭವ ಹಿನ್ನೆಲೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದರು' ಎಂದು ಕಲಾವಿದೆ ಸೀತಾ ಛಪ್ಪರ ಹೇಳಿದರು.
ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಆಲೂರು ವೆಂಕಟರಾವ್ ರಾಷ್ಟ್ರೀಯ ಟ್ರಸ್ಟ್ ಮತ್ತು ಯೋಗ ಮಿತ್ರ ಮಹಿಳಾ ಮಂಡಳ ಜಂಟಿಯಾಗಿ ಪಾಲಿಕೆ ವ್ಯಾಪ್ತಿಯ ಮಹಿಳಾ ಮಂಡಳಗಳಿಗೆ ಏರ್ಪಡಿಸಿದ್ದ ದಾಸ ಸಾಹಿತ್ಯ ವೈಭವ ರೂಪಕ ಪ್ರದರ್ಶನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
'ಅನಕ್ಷರಸ್ಥೆಯಾಗಿದ್ದ ಹರಪನಹಳ್ಳ ಭೀಮವ್ವ ಸೇರಿದಂತೆ ಅನೇಕರು ಆ ಕಾಲದ ಆಚಾರ, ವಿಚಾರ, ವ್ಯವಸ್ಥೆ ವಿರುದ್ಧ ತಮ್ಮ ಸಾಹಿತ್ಯದ ಮೂಲಕ ದನಿ ಎತ್ತಿದ್ದರು. ಇದು ಭಾರತೀಯ ಸ್ತ್ರೀಯರ ವಿಶೇಷತೆ. ಅನುಭವ ಮತ್ತು ಅನುಭಾವದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ದಾಸ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ’ ಎಂದು ಹೇಳಿದರು. ಕಲಾವತಿ ಸವಣೂರ, ವೆಂಕಟೇಶ ದೇಸಾಯಿ, ಡಾ.ಆರ್.ವಿ. ಪಾಟೀಲ, ಅನಸೂಯಾ ಕುಲಕರ್ಣಿ, ಸುಮಾ ರಾಯಚೂರ, ಗೀತಾ ಆಲೂರ ಇದ್ದರು.
ಒಟ್ಟು 11 ಮಹಿಳಾ ಮಂಡಳಗಳು ಭಾಗವಹಿದ್ದವು.ಹುಬ್ಬಳ್ಳಿಯ ಮಂದಹಾಸ ಮಹಿಳಾ ಮಂಡಳ (ಪ್ರಥಮ), ಧಾರವಾಡದ ಸ್ವರಸುಧಾ ಮಹಿಳಾ ಮಂಡಳ (ದ್ವಿತೀಯ), ಭಾರತಿ ನಗರ ಮಹಿಳಾ ಮಂಡಳ (ತೃತೀಯ) ಹಾಗೂ ಹುಬ್ಬಳ್ಳಿಯ ಏಕತಾ ಮತ್ತು ಪ್ರದ್ಮಜಾ ಮಹಿಳಾ ಮಂಡಳ ಸಮಾಧಾನಕರ ಬಹುಮಾನ ಗಳಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.