ಧಾರವಾಡ: ನಗರದಲ್ಲಿ ಗುರುವಾರ ಬೆಳಗಿನ ಜಾವ ಮತ್ತು ಸಂಜೆ ಕೆಲ ಕಾಲ ಸುರಿದ ಮಳೆ ತಂಪಿನ ವಾತಾವರಣ ಸೃಷ್ಟಿಸಿತು. ಕಳೆದ ಒಂದು ವಾರದಿಂದ ನಗರದಲ್ಲಿ ಬಿಸಿಲಿನ ಝಳ ಮತ್ತು ಸೆಖೆ ಹೆಚ್ಚಾಗಿತ್ತು. ಬೆಳಿಗ್ಗೆ ಕೆಲ ಕಾಲ ಜೋರಾಗಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ಹರಿಯಿತು.
ಮಧ್ಯಾಹ್ನ ಪೂರ್ಣ ಮೋಡ ಕವಿದ ವಾತಾವರಣವಿತ್ತು. ಆದರೆ ಸೆಖೆ ಹೆಚ್ಚಾಗಿತ್ತು. ಸಂಜೆ 4ರ ಸುಮಾರಿಗೆ ಜಿಟಿ, ಜಿಟಿ ಮಳೆ ಆರಂಭವಾಗಿ ನಂತರ ಸ್ವಲ್ಪ ಜೋರಾಗಿಯೇ ಸುರಿಯಿತು. ಶಾಲೆ ಬಿಡುವ ಸಮಯವಾಗಿದ್ದರಿಂದ ಮಕ್ಕಳು, ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ನೆನೆಯುತ್ತ ಸಾಗಿದ ದೃಶ್ಯಗಳು ಕಂಡು ಬಂದವು. ಅಚಾನಕ್ಕಾಗಿ ಬಂದ ಮಳೆಯಿಂದಾಗಿ ಬೀದಿ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು.
ಹುಬ್ಬಳ್ಳಿ ವರದಿ
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉತ್ತರ ಒಳನಾಡಿನ ಹುಬ್ಬಳ್ಳಿಯಲ್ಲಿಯೂ ಸಂಜೆ ಕೆಲ ಕಾಲ ಜಿಟಿ ಜಿಟಿ ಮಳೆ ಸುರಿಯಿತು. ಇದರಿಂದಾಗಿ ನಗರ ಯುಗಾದಿಯ ಸಂಭ್ರಮವನ್ನು ಆಚರಿಸಿತು. ಐದು ನಿಮಿಷ ಸಣ್ಣಗೆ ಹನಿಗಳು ಸುರಿದಿದ್ದರಿಂದ ಬೆಳಿಗ್ಗೆಯಿಂದ ಬಿಸಿಲ ಧಗೆಯಿಂದ ತತ್ತರಿಸಿದ್ದು ಜನರು ತಂಪಿನ ಅನುಭವ ಪಡೆದರು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತಾದರೂ ಮಳೆಯ ನಿರೀಕ್ಷೆ ಇರಲಿಲ್ಲ.
ಧಾರಾಕಾರ ಮಳೆ
ಗುಡಗೇರಿ: ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಗುರುವಾರ ಮುಂಜಾನೆ ಸುಮಾರು 1 ಗಂಟೆ ಕಾಲ ಧಾರಾಕಾರ ಸುರಿಯಿತು.
ಅದರಿಂದ ರೈತರು ಕಣದಲ್ಲಿ ಹಾಕಿದ್ದ ಜೋಳ, ಗೋಧಿ, ಕುಸುಬಿ ಸೇರಿದಂತೆ ಹೊಟ್ಟು-ಮೇವು-ಸೊಪ್ಪು ನೆನೆದು ರೈತರು ಪರದಾಡಿದರು.
ಇನ್ನು, ‘ಮಳೆಯಿಂದ ಕೊಯ್ಲಿಗೆ ಬಂದಿದ್ದ ಹೊಲದಲ್ಲಿನ ಕುಸುಬೆ ಬೆಳೆ ಸಿಡಿದಿದ್ದು, ಅಪಾರ ಹಾನಿಯಾಗಿದೆ’ ಎಂದು ಗುಡಗೇರಿ ರೈತ ಮಂಜುನಾಥ ಅಣ್ಣಿಗೇರಿ ಪ್ರಜಾವಾಣಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.