ಹುಬ್ಬಳ್ಳಿ: ‘ಮಳೆಗಾಲದಲ್ಲಿ ಹರಿಯುವ ನೀರನ್ನು ತಡೆಯಬೇಕು. ತಡೆದ ನೀರನ್ನು ಇಂಗುವ ಹಾಗೆ ಮಾಡಿದರೆ ಅಂತರ್ಜಲವನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿ, ಕಾಪಾಡಿಕೊಳ್ಳಲು ಸಾಧ್ಯ’ ಎಂದು ಪರಿಸರಪ್ರೇಮಿ ಡಾ. ಮಹಾಂತೇಶ ತಪಶೆಟ್ಟಿ ಹೇಳಿದರು.
ಲಯನ್ಸ ಕ್ಲಬ್ ಆಫ್ ಹುಬ್ಬಳ್ಳಿ ನಗರ ಘಟಕ ಪರಿಸರ ಸಂರಕ್ಷಣಾ ಯೋಜನೆ ಅಡಿಯಲ್ಲಿ ಗೋ ಗ್ರೀನ್ ಎಚ್.ಡಿ. ಆಶ್ರಯದಲ್ಲಿ ನೃಪತುಂಗ ಬೆಟ್ಟದಲ್ಲಿ 50ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಹಸಿರೇ ಉಸಿರು, ನಮ್ಮ ನಗರವನ್ನು ಹಸಿರು ಪರಿಸರವನ್ನಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು, ಪೋಷಿಸಿಕೊಂಡು ಹೊಗಬೇಕು. ಇಂಗು ಗುಂಡಿಗಳಲ್ಲಿ 500ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಯೋಜನೆ ಇದೆ. ನಾಗರೀಕರು ನೀರನ್ನು ಹಿತ ಮಿತವಾಗಿ ಬಳಕೆ ಮಾಡಬೇಕು. ನೀರು ಹೆಚ್ಚು ಪೋಲು ಆಗದಂತೆ ಗಮನ ನೀಡಬೇಕು’ ಎಂದರು.
ಲಯನ್ಸ ಕ್ಲಬ್ ಆಫ್ ಹುಬ್ಬಳ್ಳಿ ನಗರ ಘಟಕ ಅಧ್ಯಕ್ಷ ಶಂಕರ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ನಿತೀಶ ಜೈನ್, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ಉಪಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಚಂದ್ರಕಾಂತ ಹೊಸಮನಿ, ದಾಕ್ಷಾಯಿಣಿ ಕೋಳಿವಾಡ, ನಾಗರಾಜ ಮಕಾವಿ, ಸಿದ್ದಪ್ಪ ಬೆನ್ನೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.