ಹುಬ್ಬಳ್ಳಿ: ಉದ್ದಿಮೆ ಹಾಗು ವ್ಯಾಪಾರಸ್ಥರ ಅನುಕೂಲಕ್ಕಾಗಿ ಹುಬ್ಬಳ್ಳಿಯಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಸ್ ಪ್ರಾದೇಶಿಕ ಕಚೇರಿಯ ಶಾಖೆ ಸ್ಥಾಪಿಸಬೇಕೆಂದು ಸಂಸದ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಹುಬ್ಬಳ್ಳಿ ನಗರದ ವ್ಯಾಪಾರಸ್ಥರ ಹಾಗೂ ಉದ್ದಿಮೆ ದಾರರ ನಿಯೋಗ ಕೇಂದ್ರ ಆಹಾರ ಸಚಿವ ರಾಮ್ವಿಲಾಸ್ ಪಾಸ್ವಾನ್ ಅವರಿಗೆ ಮನವಿ ಸಲ್ಲಿಸಲಾಯಿತು.
‘ಹುಬ್ಬಳ್ಳಿಯ ಜನರು ದೂರದ ಬೆಂಗಳೂರಿಗೆ ಈ ಕೆಲಸಕ್ಕಾಗಿ ಹೋಗ ಬೇಕಾಗುತ್ತಿದ್ದು, ಅದಕ್ಕಾಗಿ ವಿನಾಕಾರಣ ಹೆಚ್ಚಿನ ಸಮಯ ಹಾಗೂ ಹಣ ವೆಚ್ಚ ಮಾಡಬೇಕಾಗಿದೆ. ಈಗಾಗಲೇ ಹುಬ್ಬಳ್ಳಿ ಹಾಗೂ ಸುತ್ತಲಿನ ಉತ್ತರ ಕರ್ನಾಟಕ ಭಾಗದಿಂದ ಉಕ್ಕು ಹಾಗೂ ಸಿಮೆಂಟ್ ಸೇರಿದಂತೆ ಸುಮಾರು 250 ಉದ್ದಿಮೆ ಗಳು ಬಿಐಎಸ್ ಪರವಾನಿಗೆ ಹೊಂದಿವೆ.
ಹುಬ್ಬಳ್ಳಿಯಲ್ಲಿ ಈ ಕಚೇರಿ ಸ್ಥಾಪಿತವಾದಲ್ಲಿ ಸಮಸ್ತ ಉತ್ತರ ಕರ್ನಾಟಕ ಭಾಗದ ವ್ಯಾಪಾರ ಹಾಗೂ ಉದ್ದಿಮೆಗಳ ಬೆಳವಣಿಗೆಗೆ ಸಹಕಾರಿ ಯಾಗಲಿದೆ’ ಎಂದು ಜೋಶಿ ಸಚಿವರ ಗಮನಕ್ಕೆ ತಂದರು.
ಸಚಿವ ಪಾಸ್ವಾನ್ ಸ್ಥಳದಲ್ಲಿಯೇ ಬಿಐಎಸ್ ಮಹಾ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಈ ಬಗ್ಗೆ ಕೂಡಲೇ ಕಡತಮಂಡಿಸಿ, ಕ್ರಮ ಕೈಗೊಳ್ಳಲು ಆದೇಶಿಸಿದರು. ಹೀಗಾಗಿ ಶೀಘ್ರವೇ ಹುಬ್ಬಳ್ಳಿಯಲ್ಲಿ ಕಚೇರಿ ಸ್ಥಾಪನೆ ಯಾಗಲಿದೆ ಎಂದು ಜೋಶಿ ತಿಳಿಸಿದರು.
ಹುಬ್ಬಳ್ಳಿಯ ನಿಯೋಗದಲ್ಲಿ ಮನೋಹರ ಕೊಟ್ರಶೆಟ್ಟರ, ವಿಶ್ವಜೀತ ಉಳ್ಳಿಗೇರಿ, ನರೇಂದ್ರ ಕುಲಕರ್ಣಿ, ಸಿದ್ದರಾಮಗೌಡ ಪಾಟೀಲ, ಶ್ರೀಕಾಂತ ಥಿಟೆ, ರವೀಂದ್ರ ಮಹಾಜನ್, ಶ್ರೀರಂಗ ಹನಮಸಾಗರ, ಬಿ.ಎಂ. ಪುರೋಹಿತ, ಶಾಮ ರಾಯಸ್ತ ಇದ್ದರು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.