ಹುಬ್ಬಳ್ಳಿ: ಕಣಿ ಹೇಳಿದ ಕೊರವಂಜಿ ವಿದ್ಯಾರ್ಥಿಗಳನ್ನು ಮತ್ತು ಅತಿಥಿಗಳನ್ನು ನಗೆಗಡಲಲ್ಲಿ ತೇಲಿಸಿದರೆ, ವೀರಾವೇಶದ ಸಂಭಾಷಣೆ ಮೂಲಕ ಸಂಗೊಳ್ಳಿ ರಾಯಣ್ಣ ಮತ್ತು ಭಗತ್ ಸಿಂಗ್ ರೋಮಾಂಚನಗೊಳಿಸಿದರು.ನಗರದ ಕಾಡಸಿದ್ದೇಶ್ವರ ಕಲಾ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
ಹಿರಣ್ಯಕಶಿಪು, ದುರ್ಯೋಧನ, ಶಕುಂತಲೆ, ಗಾಂಧಾರಿ, ಸುಭಾಶ್ಚಂದ್ರ ಬೋಸ್ ಪಾತ್ರಗಳು ವೇದಿಕೆ ಮೇಲೇರಿದಾಗ ಸಭಾಂಗಣದಲ್ಲಿ ಶಿಳ್ಳೆ–ಚಪ್ಪಾಳೆಯ ಸದ್ದು ಜೋರಾಯಿತು. ‘ಕಬಾಲಿ’ ವೇಷಧಾರಿ ಬಂದಾಗ ಸಭಾಂಗಣದಲ್ಲಿದ್ದವರು ರೋಮಾಂಚನಗೊಂಡರು. ಶ್ವೇತಾ ಶಿರಬಡಗಿ, ಕಾರ್ತಿಕ್ ರಾಯ್ಕರ್, ಸುನೀಲ, ನಿತೇಶ್ ಡಂಬಳ, ಅಂಜಲಿದೇವಿ, ವರ್ಷಾ ಮಾನೆ, ಮಮತಾ ಕುಲಕರ್ಣಿ, ಮುತ್ತುರಾಜ್ ವೈವಿಧ್ಯಮಯ ಪಾತ್ರಗಳಲ್ಲಿ ಗಮನ ಸೆಳೆದರು.
ಸಂಚಾರ ನಿಯಮ ಪಾಲನೆಗೆ ಸಲಹೆಮುಖ್ಯ ಅತಿಥಿಯಾಗಿದ್ದ ಉಪ ಪೊಲೀಸ್ ಆಯುಕ್ತ ಮಲ್ಲಿಕಾರ್ಜುನ ಬಾಲದಂಡಿ ಸಂಚಾರ ನಿಯಮಗಳನ್ನು ಪಾಲಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.‘ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೂ ಜನರು ಪೂರಕವಾಗಿ ಸ್ಪಂದಿಸುವುದಿಲ್ಲ’ ಎಂದು ಅವರು ವಿಷಾದಿಸಿದರು.
ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸ್ಥಳೀಯ ನಿರ್ದೇಶಕರಾದ ಎಸ್.ಐ.ಮುನವಳ್ಳಿ ಹಾಗೂ ವಿ.ಎಸ್. ಸಾಧುನವರ ಮಾತನಾಡಿದರು.ಕಾಡಸಿದ್ದೇಶ್ವರ ಕಾಲೇಜಿನ ಪ್ರಾಚಾರ್ಯ ಬಿ.ಆರ್. ಪಾಟೀಲ, ಕ್ರೀಡಾ ವಿಭಾಗದ ಸಂಯೋಜಕ ಆರ್.ಎಫ್.ಇಂಚಲ, ಕೆಎಲ್ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಸಿ.ಬಿ. ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.