ADVERTISEMENT

ರಸ್ತೆ ದುರಸ್ತಿಗೆ ಆಗ್ರಹಿಸಿ ದಿಢೀರ್‌ ಬಂದ್‌ ಮಾಡಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:27 IST
Last Updated 12 ಜನವರಿ 2017, 9:27 IST
ಧಾರವಾಡದ ಡಿಪೊ ಸರ್ಕಲ್‌ನಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಧಾರವಾಡದ ಡಿಪೊ ಸರ್ಕಲ್‌ನಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದರು.   
ಧಾರವಾಡ: ಹದಗೆಟ್ಟ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಮದಿಹಾಳದ ನಿವಾಸಿ­ಗಳು ಮಂಗಳವಾರ ಡಿಪೊ ಸರ್ಕಲ್‌ನಲ್ಲಿ ದಿಢೀರ್‌ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
 
ಮದಿಹಾಳದ ಪ್ರಮುಖ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದರಿಂದ ಉಂಟಾಗುವ ಧೂಳಿನಿಂದ ಇಲ್ಲಿನ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿ­ದ್ದಾರೆ. ಪ್ರತಿದಿನ ನೂರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಇದರಿಂದ ದಿನದಿಂದ ದಿನಕ್ಕೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕು. ರಸ್ತೆ ದುರಸ್ತಿ ಆಗುವವರೆಗೂ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.
 
‘ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯವನ್ನು ಕೂಡಲೇ ಕೈಗೆತ್ತಿಕೊಳ್ಳ­ದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗ­ಬೇಕಾಗುತ್ತದೆ. ಮದಿಹಾಳದ ಬಹುತೇಕ ಕಾಲೊನಿಗಳಲ್ಲಿ ಪಾಲಿಕೆ ಕಾರ್ಮಿಕರು ಸರಿಯಾದ ಸಮಯಕ್ಕೆ ತ್ಯಾಜ್ಯ ವಿಲೇವಾರಿಯನ್ನೂ ಮಾಡುತ್ತಿಲ್ಲ. ಇತರ ಕಾಲೊನಿಗಳಲ್ಲಿರುವಂತೆ ಮದಿಹಾಳದ ಕಾಲೊನಿಗಳಲ್ಲೂ 24X7 ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದರು.                
 
ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರಿಂದ ಕೆಲ ಹೊತ್ತು ವಾಹನ ಸವಾರರು ಪರದಾಡುವಂತಾಯಿತು. ಕೆಲ ಹೊತ್ತು ವಾಹನ ದಟ್ಟನೆಯೂ ಉಂಟಾ­ಗಿತ್ತು. ಪ್ರತಿಭಟನೆ ನಡೆಯುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೂ ಪ್ರತಿಭಟನೆ ಮುಂದುವರಿಸಿದರು. 
 
ನಂತರ ಸ್ಥಳಕ್ಕೆ ಬಂದ ಪಾಲಿಕೆ ಸದಸ್ಯ ದೀಪಕ ಚಿಂಚೋರೆ, ‘ಈಗಾಗಲೇ ಮದಿ­ಹಾಳ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಭೂಮಿಪೂಜೆ ನೆರವೇರಿಸಲಾಗಿದೆ. ಆದರೆ, ಕೆಲವರು 24X7 ನೀರಿನ ಸಂಪರ್ಕ ಪಡೆಯದ ಕಾರಣ ಕಾಮಗಾರಿಯನ್ನು ಪ್ರಾರಂಭಿಸಿಲ್ಲ’ ಎಂದು ಒತ್ತಾಯಿಸಿದರು.
 
ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಅರವಿಂದ ಏಗನಗೌಡರ, ನಿವಾಸಿಗಳಾದ ಸಾಗರ ಜಿ., ಸಂತೋಷ ಕೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.